ಹಾವೇರಿ: ಕೊರೊನಾ ಸೋಂಕು ಹರಡುವ ಭೀತಿಯಿಂದ ಭಾರತ ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೊರಗೆ ಓಡಾಡುತ್ತಿದ್ದ ಬೈಕ್ ಮತ್ತು ಕಾರು ಸವಾರರಿಗೆ ಪೊಲೀಸರು ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಗ್ರಾಮದಲ್ಲಿ ಬೈಕ್ ಮತ್ತು ಕಾರಿನಲ್ಲಿ ಓಡಾಡುತ್ತಿದ್ದವರಿಗೆ ಪೊಲೀಸರು ಬೆತ್ತದ ರುಚಿ ತೋರಿಸಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಗತ್ಯ ವಸ್ತುಗಳನ್ನು ತರಲು ಬೈಕಿನಲ್ಲಿ ಓಡಾಡುತ್ತಿದ್ದವರನ್ನು ನಿಲ್ಲಿಸಿ ಮಾಸ್ಕ್ ಹಾಕಿಕೊಂಡು ಓಡಾಡುವಂತೆ ತಿಳಿ ಹೇಳಿ ಕಳುಹಿಸುತ್ತಿದ್ದಾರೆ.
ಅದರಲ್ಲೂ ಬೈಕಿನಲ್ಲಿ ಇಬ್ಬಿಬ್ಬರು ಓಡಾಡುತ್ತಿದ್ದವರಲ್ಲಿ ಒಬ್ಬರನ್ನು ಇಳಿಸಿ ಲಾಠಿ ರುಚಿ ತೋರಿಸಿದ್ದಾರೆ. ಕೈ ಮುಗಿದು, ಕಾಲಿಗೆ ಬಿದ್ದು ಹೊರಗೆ ಬರದಂತೆ ಕೇಳಿಕೊಂಡರೂ ನಿಮಗೆ ಅರ್ಥ ಆಗೋದಿಲ್ವಾ? ನಿಮ್ಮ ಜೀವನದ ಮೇಲೆ ನಿಮಗೆ ಕಾಳಜಿ ಇಲ್ವಾ ಎಂದು ಪೊಲೀಸರು ಜನರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆರೋಗ್ಯ ಇಲಾಖೆ ಸೇರಿದಂತೆ ಎಲ್ಲರೂ ಹೊರಗೆ ಓಡಾಡಬೇಡಿ ಎಂದು ಹೇಳುತ್ತಿದ್ರು, ಯಾಕೆ ಹೊರಗೆ ಓಡಾಡುತ್ತೀರಾ ಎಂದು ಬೈಕ್ ಮತ್ತು ಕಾರಿನಲ್ಲಿ ಓಡಾಡುತ್ತಿದ್ದವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರ ಲಾಠಿ ರುಚಿಗೆ ಸುಸ್ತಾಗಿರೋ ಬೈಕ್ ಮತ್ತು ಕಾರು ಸವಾರರು ಮನೆಯಿಂದ ಹೊರಗೆ ಬರಬಾರದಪ್ಪಾ ಎನ್ನುತ್ತಾ ಮನೆಯತ್ತ ಹೋದರು.