ಬೆಳಗಾವಿ: ನಮಗೆ ಅನ್ನ ಬೇಡ, ನಮ್ಮ ಜಾನುವಾರುಗಳಿಗೆ ಕೊಡಿ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಗೋಕಾಕ್ ರೈತರು ಕಣ್ಣೀರು ಹಾಕಿದ್ದಾರೆ.
ಗೋಕಾಕ್ನಲ್ಲಿ ಮನೆ ಮಠ ಕಳೆದುಕೊಂಡ ಜನರು ತಮ್ಮ ಜಾನುವಾರಗಳನ್ನು ಕರೆ ತಂದು ಅದರ ಜೊತೆಯೇ ಎಪಿಎಂಸಿಯಲ್ಲಿ ಬದುಕುತ್ತಿದ್ದಾರೆ. ಈ ವೇಳೆ ಸಂತ್ರಸ್ತರು ಪರಿಹಾರ ಕೇಂದ್ರಕ್ಕೆ ಹೋಗದೆ ತಾವು ಸಾಕಿದ ಎಮ್ಮೆ, ಹಸು, ಕರು ಆಡುಗಳ ಜೊತೆ ಬದುಕುತ್ತಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೈತರು, ನಮಗೆ ಗಂಜಿ ಬೇಡ, ನಮ್ಮ ಜಾನುವಾರುಗಳಿಗೆ ಮೇವು ಕೊಡಿ. ಜಾನುವಾರುಗಳಿಗೆ ಮೇವು ಕೊಡಲು ನಿಮಗೆ ಸಾಧ್ಯವಾಗದೇ ಇದ್ದರೆ ಇದನ್ನು ಯಾರು ಬೇಕಾದ್ರೂ ಕರೆದುಕೊಂಡು ಹೋಗಿ ಎಂದು ರೈತರು ಕಣ್ಣೀರು ಹಾಕಿದ್ದಾರೆ.
ನೀರಿನಲ್ಲೇ ನಮ್ಮ ಜಾನುವಾರುಗಳನ್ನು ಕರೆದುಕೊಂಡು ಬಂದಿದ್ದೇವೆ. ನಾವು ಚಿನ್ನ, ಹಣವನ್ನು ಮನೆಯಲ್ಲಿಯೇ ಬಿಟ್ಟು ಜೀವ ಕೈಯಲ್ಲಿ ಹಿಡಿದುಕೊಂಡು ಇಲ್ಲಿಗೆ ಬಂದಿದ್ದೇವೆ. ಆದರೆ ಮನೆಯಲ್ಲಿ ಕೂಡಿಟ್ಟ ಚಿನ್ನವನ್ನು, ಹಣವನ್ನು ಕಳ್ಳರು ಕದಿಯುತ್ತಿದ್ದಾರೆ ಎಂದು ಮತ್ತೊಬ್ಬ ರೈತ ನೋವು ತೋಡಿಕೊಂಡಿದ್ದಾರೆ.
ನಮಗೆ ಊಟ ಮಾಡಲು ಇಲ್ಲಿ ಅನ್ನ, ನೀರು ಇದೆ. ಅಲ್ಲದೆ ಜನರು ಬಟ್ಟೆ ಸೇರಿ ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ. ನಮಗೆ ಯಾವುದಕ್ಕೂ ಇಲ್ಲಿ ಕೊರತೆ ಇಲ್ಲ. ಆದರೆ ಜಾನುವಾರುಗಳಿಗೆ ಒಂದು ದಿನಕ್ಕೆ ಮಾತ್ರ ಮೇವು ಇದೆ. ಆದರೆ ನಾಳೆಯಿಂದ ಜಾನುವಾರುಗಳಿಗೆ ಮೇವು ಸಿಗುತ್ತಾ ಇಲ್ಲವಾ ಗೊತ್ತಿಲ್ಲ ಎಂದು ರೈತರು ಕಣ್ಣೀರು ಹಾಕಿದ್ದಾರೆ.