ಬೆಂಗಳೂರು: ಈಗಾಗಲೇ ದೇಶದಲ್ಲಿ 5 ವರ್ಷ ನಿಷೇಧಕ್ಕೆ ಒಳಗಾಗಿರುವ ಪಿಎಫ್ಐ (PFI) ಸಂಘಟನೆಯ ಕುರಿತಾಗಿ ಮತ್ತಷ್ಟು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿದೆ. ಬೆಂಗಳೂರಿನಲ್ಲಿ (Bengaluru) ಆಯೋಧ್ಯೆ (Ayodhya) ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸಿ ಗಲಾಟೆ ನಡೆಸಬೇಕೆಂದು ಪಿಎಫ್ಐ ಕಾರ್ಯಕರ್ತರು ಕರಪತ್ರ ಹಂಚಿರುವ ಮಾಹಿತಿ ಪೊಲೀಸರ (Police) ತನಿಖೆ ವೇಳೆ ತಿಳಿದುಬಂದಿದೆ.
ಪೊಲೀಸರು ತನಿಖೆ ನಡೆಸುವ ವೇಳೆ ಆರೋಪಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಅಯೋಧ್ಯೆ ತೀರ್ಪಿನಿಂದ ಕಣ್ಣು ಕೆಂಪಗೆ ಮಾಡಿಕೊಂಡಿದ್ದ ಪಿಎಫ್ಐ ಕಾರ್ಯಕರ್ತರು ಅಯೋಧ್ಯೆ ತೀರ್ಪು ಈ ದೇಶದ ದೊಡ್ಡ ಅನ್ಯಾಯದ ತೀರ್ಪು. ಈ ತೀರ್ಪುನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ತೀರ್ಪನ್ನು ವಿರೋಧಿಸಿ ನಾವು ಗಲಾಟೆ ಮಾಡಬೇಕು. ಪ್ರತಿಭಟನೆ ಮಾಡಬೇಕು. ನಿರಂತರವಾಗಿ ಪ್ರತಿಭಟನೆಗಳು ನಡೆಯಬೇಕು ಎಂದು ನಿರಂತರವಾಗಿ ಒಂದು ತಿಂಗಳ ಕಾಲ ಆರೋಪಿಗಳು ಕರಪತ್ರಗಳನ್ನು (Pamphlet) ಹಂಚಿದ್ದರು ಎಂಬ ಸತ್ಯ ಬಯಲಾಗಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಧ್ವಂಸಕ್ಕೆ PFI ಸ್ಕೆಚ್
ಆರೋಪಿಗಳು ಯಾರಿಗೂ ಗೊತ್ತಾಗದಂತೆ ಕರಪತ್ರಗಳನ್ನು ಹಂಚಿದ್ದರು. ನಾಯಕರುಗಳ ಮಾತನ್ನು ನಂಬಿ ಕರಪತ್ರಗಳನ್ನು ಹಂಚಿದ್ದರು. ಕರಪತ್ರಗಳನ್ನು ಹಂಚುವಂತೆ ಸೂಚನೆ ನೀಡಲಾಗಿತ್ತು. ಈ ಮೂಲಕ ಪ್ರತಿಭಟನೆಗೆ ಹುನ್ನಾರ ನಡೆಸಿದ್ದರು ಎಂಬ ರಹಸ್ಯ ಬಹಿರಂಗಗೊಂಡಿದೆ. ಇದನ್ನೂ ಓದಿ: ಕುರಾನ್ ಮಾತ್ರವಲ್ಲ, ಭಗವದ್ಗೀತೆ ಕೂಡಾ ಜಿಹಾದ್ ಕಲಿಸುತ್ತದೆ: ಶಿವರಾಜ್ ಪಾಟೀಲ್
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಧ್ವಂಸ ಮಾಡಲು ಪಿಎಫ್ಐ ಷಡ್ಯಂತ್ರ ರೂಪಿಸಿತ್ತು ಎಂಬುದನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ (ATS) ಬಹಿರಂಗಪಡಿಸಿತ್ತು. ರಾಮಮಂದಿರ ಧ್ವಂಸ ಮಾಡಿ ಅದರ ಜಾಗದಲ್ಲಿ ಬಾಬ್ರಿ ಮಸೀದಿ ನಿರ್ಮಿಸಲು ಪಿಎಫ್ಐ ಪ್ಲಾನ್ ಮಾಡಿತ್ತು. ಅಷ್ಟೇ ಅಲ್ಲದೇ 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಅವರು ಯೋಜಿಸಿದ್ದರು ಎನ್ನಲಾಗಿದೆ.