ಮಂಡ್ಯ: ಇಂದು ಸಿಎಂ ಕುಮಾರಸ್ವಾಮಿ ಅವರು ಭಾಗವಹಿಸಿದ್ದ ಪ್ರಚಾರ ಸಮಾವೇಶದ ಬಳಿ ಇದ್ದ ನಾಲೆಗೆ ಬಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಪಾಂಡವಪುರ ಬಳಿ ನಡೆದಿದೆ.
ತಾಲೂಕಿನ ಜಕ್ಕನ ಹಳ್ಳಿ ನಿವಾಸಿ ಕುಮಾರ್ (40) ಮೃತಪಟ್ಟ ವ್ಯಕ್ತಿಯಾಗಿದ್ದು, ಸಿಎಂ ಕಾರ್ಯಕ್ರಮ ಆಯೋಜಿಸಲಾಗಿದ್ದ ಬಳಿಯ ನಾಲೆಯಲ್ಲಿ ತೆರಳಿದ ವೇಳೆ ಘಟನೆ ನಡೆದಿದೆ. ಮೃತ ಕುಮಾರ್ ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಆಕಸ್ಮಿಕವಾಗಿ ಘಟನೆ ನಡೆದಿದೆ ಎನ್ನಲಾಗಿದೆ.
ಸಿಎಂ ಕಾರ್ಯಕ್ರಮ ನಡೆಯುತ್ತಿರುವ ವೇದಿಕೆ ಸಮೀಪ ವಿಸಿ ನಾಲೆ ಹರಿಯುತ್ತಿತ್ತು. ಈ ವೇಳೆ ನಾಲೆಗೆ ಬಿದ್ದ ಕುಮಾರ್ ಅವರನ್ನು ರಕ್ಷಣೆ ಮಾಡಿ, ಬಳಿಕ ಜನರ ಒತ್ತಾಯದ ಬಳಿಕ ಸಿಎಂ ಕಾರ್ಯಕ್ರಮಕ್ಕೆ ಬಂದಿದ್ದ ಆಂಬುಲೆನ್ಸ್ ನಲ್ಲೇ ಪೊಲೀಸರು ಆಸ್ಪತ್ರೆಗೆ ಸಾಗಿಸುತ್ತಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಸಚಿವ ಪುಟ್ಟರಾಜು ಅವರು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದರು. ಆದರೆ ಕುಮಾರ್ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.
ಕಾರ್ಯಕರ್ತ ಮೃತ ಪಟ್ಟ ಸುದ್ದಿ ತಿಳಿದ ಸಿಎಂ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು. ಅಲ್ಲದೇ ನೀತಿ ಸಂಹಿತೆ ಜಾರಿ ಇರುವುದರಿಂದ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡುವುದಿಲ್ಲ. ಆದರೆ ಕುಟುಂಬದ ಬಗ್ಗೆ ಮಾಹಿತಿ ಪಡೆದು ಸಹಾಯ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv