ಗದಗ: ಪ್ರೀತಿಯ ನಾಟಕವಾಡಿ ಮಹಿಳೆಯನ್ನು ಗರ್ಭಿಣಿ ಮಾಡಿದ ನಂತರ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದ ಘಟನೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಮಹಿಳೆ ಕೊನೆಗೂ ಇಂದು ಸಾವನ್ನಪ್ಪಿದ್ದಾರೆ.
ಸತತ ಐದು ವರ್ಷಗಳಿಂದ ಮಹಿಳೆಯ ಜೊತೆ ಪ್ರೀತಿಯ ನಾಟಕವಾಡಿದ್ದ ಯುವಕ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಣಿ ಮಾಡಿದ್ದ, ಆದರೆ ಮಹಿಳೆ ಮದುವೆ ಮಾಡಿಕೊಳ್ಳಲು ಕೇಳಿದ ಸಂದರ್ಭದಲ್ಲಿ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಸಾವನ್ನಪ್ಪಿದ್ದಾರೆ.
ಏನಿದು ಘಟನೆ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾಮದ ಮಹಿಳೆ ಶಾಂತವ್ವ ಮತ್ತು ಪ್ರಕಾಶ್ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಬಗ್ಗೆ ಮನೆಯವರಿಗೆ ತಿಳಿದ ಮೇಲೆ ಎರಡು ವರ್ಷಗಳ ಹಿಂದೆ ಶಾಂತವ್ವನಿಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಮದುವೆಯಾದ ಮೇಲೂ ಪ್ರಕಾಶ್ ನಿನ್ನ ಬಿಟ್ಟು ಇರುವುದಿಲ್ಲ ಎಂದು ಶಾಂತವ್ವಗೆ ಹೇಳಿದ್ದಾನೆ. ಹೀಗಾಗಿ ಸಂತ್ರಸ್ತೆ ಗಂಡನನ್ನ ಬಿಟ್ಟು ತವರಿಗೆ ಬಂದಿದ್ದರು.
ಇವರಿಬ್ಬರು ಮತ್ತೆ ಪ್ರೀತಿ ಶುರು ಮಾಡಿ ಅನೈತಿಕ ಸಂಬಂಧ ಹೊಂದಿದ್ದರು. ಮಹಿಳೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಮದುವೆಯಾಗುವಂತೆ ಪ್ರಕಾಶ್ನನ್ನು ಕೇಳಿದ್ದರು. ಆದರೆ ಪ್ರಕಾಶ್ ಬೇರೆ ಬೇರೆ ಜಾತಿ ಮದುವೆ ಸಾಧ್ಯವಿಲ್ಲ ಎಂದು ನಿರಾಕರಿಸಿದ್ದ. ಇದರಿಂದ ನೊಂದ ಸಂತ್ರಸ್ತೆ ನ್ಯಾಯ ಕೇಳಲು ಶುಕ್ರವಾರ ಸಂಜೆ ತಾಯಿಯ ಜೊತೆ ಪ್ರಕಾಶ್ ಮನೆಗೆ ಹೋಗಿದ್ದರು. ನಾನು ಗಂಡನನ್ನು ಬಿಟ್ಟು ಬಂದೆ. ನನ್ನ ಜೀವನ ಹಾಳಾಗಿದೆ, ಮದುವೆಯಾಗು ಎಂದು ಕೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಕಾಶ್ ಮತ್ತು ಕುಟುಂಬಸ್ಥರು ಸೇರಿ ಶಾಂತವ್ವ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.
ಈ ವೇಳೆ ಮೃತರ ಪೋಷಕರು ಆಕೆಯನ್ನು ಗದಗ ಜಿಲ್ಲಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಶಾಂತವ್ವ ಮೃತ ಪಟ್ಟಿದ್ದಾರೆ.