ಕೋಲಾರ: ನಾಗರಹಾವು ಕಚ್ಚಿ ರೈತ ಮೃತಪಟ್ಟಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಹಾವು ಮತ್ತು ಅದರ ಜೊತೆಗಿದ್ದ 17 ಮರಿ ಹಾವುಗಳನ್ನ ಕೊಂದಿರುವ ಮನಕಲಕುವ ಘಟನೆ ಕೋಲಾರದ ಗಡಿ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದಿನ್ನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾವು ಕೊಂದ ಸ್ಥಳದಲ್ಲಿ 17 ಮರಿ ಹಾವುಗಳು ಪತ್ತೆಯಾಗಿದ್ದು, ಆ ಮರಿಗಳನ್ನು ಸಹ ಗ್ರಾಮಸ್ಥರು ಕೊಚ್ಚಿ ಕೊಂದಿದ್ದಾರೆ.
ಆಗಿದ್ದೇನು? ಬುಧವಾರ ಹೊಲದಲ್ಲಿ ಕೆಲಸ ಮಾಡುವ ವೇಳೆ ರೈತ ಗೊವಿಂದಪ್ಪನನ್ನ ನಾಗರಾಹಾವು ಕಚ್ಚಿ ಮೃತಪಟ್ಟಿದ್ದರು. ಗೋವಿಂದಪ್ಪ ಸಾವಿನಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಹಾವನ್ನ ಹುಡುಕಿ ಕೊಂದಿದ್ದಾರೆ. ಅದೇ ಸ್ಥಳದಲ್ಲಿ 17 ಮರಿ ಹಾವುಗಳು ಕಂಡುಬಂದ ಹಿನ್ನಲೆಯಲ್ಲಿ 17 ಮರಿ ಹಾವುಗಳನ್ನು ಸಹ ಕೊಂದಿದ್ದಾರೆ.
ಇನ್ನೂ ಹಾವು ಹಾಗೂ ಮರಿಗಳನ್ನ ಕೊಂದಿರುವ ಗ್ರಾಮಸ್ಥರು ಮೊಬೈಲ್ಗಳಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಸದ್ಯ ಗ್ರಾಮದಲ್ಲಿ ಹಾವು ಕೊಂದ ವಿಚಾರದಲ್ಲಿ ಆತಂಕ ಸೃಷ್ಟಿಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಹಾವುಗಳನ್ನು ಕೊಂದಿದ್ದಕ್ಕೆ ನಾಗಹತ್ಯಾ ಶಾಪ ಬರಬಹುದು ಎಂದು ಗ್ರಾಮದ ಹಿರಿಯರು ಮಾತನಾಡಿಕೊಳ್ಳುತ್ತಿದ್ದಾರೆ.