ನವದೆಹಲಿ: ಇಂದಿನ ಲೋಕಸಭೆ (Lok Sabha) ಮತ್ತು ರಾಜ್ಯಸಭಾ (Rajya Sabha) ಕಲಾಪಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಬಿಜೆಪಿ (BJP) ಸದಸ್ಯರಿಗೆ ವಿಪ್ (Whip) ಜಾರಿ ಮಾಡಲಾಗಿದೆ. ಅಯೋಧ್ಯೆಯ ರಾಮಮಂದಿರ (Ayodhya Ram Mandir) ನಿರ್ಮಿಸಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಅಭಿನಂದಿಸಿ ಸಂಸತ್ತಿನ ಉಭಯ ಸದನಗಳು ನಿರ್ಣಯ ಅಂಗೀಕರಿಸಲಿವೆ.
ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್ ಮತ್ತು ಶಿವಸೇನೆ ಸಂಸದ ಶ್ರೀಕಾಂತ್ ಅವರು ರಾಮಮಂದಿರದ ಬಗ್ಗೆ ಚರ್ಚೆ ಆರಂಭಿಸಲಿದ್ದಾರೆ. ವಿರೋಧ ಪಕ್ಷಗಳು ಈ ಚರ್ಚೆಗೆ ಹೇಗೆ ಪ್ರತಿಕ್ರಿಯಿಸಲಿದೆ ಎನ್ನುವುದು ಸದ್ಯದ ಕುತೂಹಲ. ರಾಮನು ಭಾರತದ ಸಂಕೇತ, ರಾಮ ಭಾರತದ ಸಂಸ್ಕೃತಿಯ ಪ್ರತೀಕ, ರಾಮ ಏಕ ಭಾರತ ಶ್ರೇಷ್ಠ ಭಾರತದ ಪ್ರತೀಕ ಎಂಬ ನಿರ್ಣಯಗಳು ಅಂಗೀಕಾರವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಕೇಂದ್ರ ಸಚಿವರನ್ನು ಭೇಟಿಯಾದ 6 ವರ್ಷದ ʼರೈಲ್ ಮಂತ್ರಿʼ!
ಯುಪಿಎ (UPA) ಅವಧಿ ಆರ್ಥಿಕ ವೈಫಲ್ಯದ ಬಗ್ಗೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸಿದ ಶ್ವೇತ ಪತ್ರದ (White Paper) ಬಗ್ಗೆ ಇಂದು ರಾಜ್ಯಸಭೆಯಲ್ಲಿ ಚರ್ಚೆ ನಡೆಯಲಿದೆ.
ಶುಕ್ರವಾರ ಅಂತ್ಯವಾಗಬೇಕಿದ್ದ ಬಜೆಟ್ ಅಧಿವೇಶನವನ್ನು ಕೇಂದ್ರ ಸರ್ಕಾರ ಒಂದು ದಿನ ವಿಸ್ತರಣೆ ಮಾಡಿದ್ದು, ಇದೀಗ ಕಲಾಪದ ಅಂತಿಮ ದಿನ ತನ್ನೆಲ್ಲಾ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ಕಡ್ಡಾಯವಾಗಿ ಕಲಾಪದಲ್ಲಿ ಹಾಜರಿರುವಂತೆ ವಿಪ್ ಜಾರಿಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಈ ನಡೆ ಇಂದಿನ ಕಲಾಪದಲ್ಲಿ ಮೋದಿ ಸರ್ಕಾರದ ನಡೆಯತ್ತ ಕುತೂಹಲ ಕೆರಳಿಸುವಂತೆ ಮಾಡಿದೆ.
ಬಜೆಟ್ ಅಧಿವೇಶನದ ಕೊನೆಯ ದಿನ ಅಂದರೆ ಇಂದು ಫೆಬ್ರವರಿ 10 ಕೆಲ ಪ್ರಮುಖ ಶಾಸಕಾಂಗ ವ್ಯವಹಾರಗಳ ಕುರಿತು ಸದನದಲ್ಲಿ ಚರ್ಚೆ ನಡೆಸಲಾಗುತ್ತದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಹಾಜರಾತಿ ಇರಬೇಕು ಎಂದು ಬಿಜೆಪಿ ಮುಖ್ಯ ಸಚೇತಕ ಲಕ್ಷ್ಮೀಕಾಂತ್ ಬಾಜ್ಪೇಯ್ ವಿಪ್ ಹೊರಡಿಸಿದ್ದಾರೆ.
ಲೋಕಸಭಾ ಚುನಾವಣೆ ಅಖಾಡಕ್ಕಿಳಿಯುವ ಮೊದಲು ನಡೆಯುತ್ತಿರುವ ಕೊನೆಯ ಅಧಿವೇಶನ ಇದಾಗಿದೆ. ಹೀಗಾಗಿ ಪ್ರಧಾನಿ ಮೋದಿ ಸರ್ಕಾರ ಕೆಲ ಅಚ್ಚರಿ ನೀಡುವ ಸಾಧ್ಯತೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.