ಲಕ್ನೋ: ಚಿನ್ನದ ಆಸೆಗಾಗಿ ತಂದೆ ತಾಯಿಯೇ ಮಗಳನ್ನು ಬಲಿ ಕೊಟ್ಟ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಕನೌಜ್ ನಿವಾಸಿಯಾದ ಆಭರಣ ವ್ಯಾಪಾರಿ ಮಹಾವೀರ್ ಪ್ರಸಾದ್ ತನ್ನ ಉದ್ಯಮದಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಿದ್ದ. ತನ್ನ ಕಷ್ಟಗಳೆಲ್ಲಾ ಆದಷ್ಟು ಬೇಗ ಪರಿಹಾರವಾಗ್ಲಿ ಅಂತ ಬಯಸಿದ್ದ. ಅದಕ್ಕಾಗಿ ಆತ ಏನು ಮಾಡಿದ ಎಂದು ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರ. ಈ ಥರ ತಂದೆ ತಾಯಿಯೂ ಇರ್ತಾರಾ ಅಂತ ಗಾಬರಿಯಾಗ್ತೀರ.
ಮಹಾವೀರ್ ಪ್ರಸಾದ್(55) ಹಾಗೂ ಹೆಂಡತಿ ಪುಷ್ಪ(50) ಮಗಳನ್ನೇ ಬಲಿ ಕೊಟ್ಟ ದಂಪತಿ. ಕೃಷ್ಣ ಶರ್ಮಾ ಎಂಬ ಸ್ವಯಂ ಘೋಷಿತ ಮಂತ್ರವಾದಿಯೊಬ್ಬ ತಾನು ಹೇಳಿದಂತೆ ಮಾಡಿದ್ರೆ ಹಣಕಾಸಿನ ತೊಂದರೆಯೆಲ್ಲಾ ಪರಿಹಾರವಾಗುತ್ತೆ ಅಂತ ಮಹಾವೀರ್ ದಂಪತಿಗೆ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾವೀರ್ ಬಳಿ ಪಾರ್ಟ್ ಟೈಂ ಡ್ರೈವರ್ ಆಗಿದ್ದ ಶರ್ಮಾ, ದೇವರನ್ನ ಒಲಿಸಿಕೊಳ್ಳಲು ನಿಮ್ಮ 15 ವರ್ಷದ ಮಗಳನ್ನು ಬಲಿ ಕೊಟ್ಟರೆ ಶೀಘ್ರದಲ್ಲೇ ಹೂತಿಟ್ಟ 5 ಕೆಜಿ ಚಿನ್ನ ಸಿಗುತ್ತದೆ ಅಂತ ದಂಪತಿಗೆ ಹೇಳಿದ್ದ. ಶರ್ಮಾ ಹೇಳಿದ ಮಾತಿಗೆ ಮರುಳಾದ ಮಹಾವೀರ್ ಪುಷ್ಪ ದಂಪತಿ, ಮಗಳು ಕವಿತಾಳನ್ನು ಬಲಿ ಕೊಡಲು ಒಪ್ಪಿದ್ದರು. ಮಂಗಳವಾರ ರಾತ್ರಿ ಮಗಳಿಗೆ ಮತ್ತು ಬರೋ ಔಷಧಿ ನೀಡಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿದ್ರು. ನಂತರ ಇಲ್ಲಿನ ಪಿಪಾರಿಯಾ ಮತ್ತು ಬಧೋಸಾ ಗ್ರಾಮಗಳ ನಡುವೆ ಇರುವ ಅರಳಿ ಮರದ ಬಳಿ ಮಗಳನ್ನ ಕರೆದುಕೊಂಡು ಹೋಗಿದ್ದರು.
ಹೆತ್ತವರೆದುರೇ ಅತ್ಯಾಚಾರ: ಅಲ್ಲಿ ಕೃಷ್ಣ ಶರ್ಮಾ ಪೂಜೆಯ ಭಾಗವಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನ ತಂದೆ ತಾಯಿಯ ಮುಂದೆಯೇ ವಿವಸ್ತ್ರಗೊಳಿಸಿದ್ದ. ನಂತರ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದು, ಹತ್ತಿರದಲ್ಲೆ ಶವವನ್ನ ಎಸೆದಿದ್ದ. ಶವವನ್ನ ಹೂತಿಡುವ ವೇಳೆ ತಂದೆ ತಾಯಿಯ ಎದುರೇ ಬಾಲಕಿಯ ಶವದ ಮೇಲೆ ಅತ್ಯಾಚಾರವೆಸಗಿದ್ದ. ಬಳಿಕ ಬಾಲಕಿಯ ಕತ್ತು ಸೀಳಿ ದೇವರಿಗೆ ಅರ್ಪಿಸಲೆಂದು ಆಕೆಯ ರಕ್ತವನ್ನ ಸಂಗ್ರಹಿಸಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾನೆ.
ಆದ್ರೆ ಶರ್ಮಾ ಹೇಳಿದಂತೆ ಮಗಳನ್ನ ಬಲಿ ಕೊಟ್ಟ ಮೇಲೂ ಯಾವುದೇ ಚಿನ್ನ ಸಿಗದೇ ಇದ್ದಾಗ ಮಹಾವೀರ್ ಪೊಲೀಸರ ಬಳಿ ಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಬುಧವಾರದಂದು ಕೃಷ್ಣ ಶರ್ಮಾನನ್ನು ಕನೌಜ್ ಜಿಲ್ಲೆಯ ಥಾಟಿಯಾ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕವಿತಾ ಮೃತದೇಹವನ್ನು ಗುರುವಾರದಂದು ಪತ್ತೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳಿಹಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಗೋಸ್ವಾಮಿ ಹಿಂದುಸ್ತಾನ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ. ಸದ್ಯ ತಂದೆ ತಾಯಿ ಪೊಲೀಸರ ವಶದಲ್ಲಿದ್ದು, ವಿಚಾರಣೆ ಮುಂದುವರೆದಿದೆ.
ಮಹಾವೀರ್ ದಂಪತಿಗೆ ಮತ್ತೊಬ್ಬ ವಿವಾಹಿತ ಮಗಳಿದ್ದು, ಕವಿತಾಳನ್ನು ಬಲಿ ಕೊಟ್ಟ ಪ್ರದೇಶದಿಂದ 2.ಕಿ.ಮೀ ದೂರದಲ್ಲಿರುವ ಗ್ರಾಮದಲ್ಲಿ ವಾಸವಿರುವುದಾಗಿ ವರದಿಯಾಗಿದೆ.