ಅಹಮದಾಬಾದ್: ಪದ್ಮಶ್ರೀ ಪುರಸ್ಕೃತರಾದ ಸಾವ್ಜಿ ಧೋಲಾಕಿಯಾ (Savji Dholakia) ಅವರಿಗೆ, ಕುಟುಂಬ ಗಿಫ್ಟ್ ಆಗಿ ನೀಡಿದ ಹೆಲಿಕಾಪ್ಟರ್ನ್ನು(Helicopter) ವೈದ್ಯಕೀಯ ತುರ್ತುಸ್ಥಿತಿಗಾಗಿ ದಾನ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಐವತ್ತೊಂಬತ್ತು ವರ್ಷದ ಸಾವ್ಜಿ ಧೋಲಾಕಿಯಾ ಅವರು ಹರಿಕೃಷ್ಣ ಡೈಮಂಡ್ ಕಂಪನಿಯ ಮಾಲೀಕರಾಗಿದ್ದಾರೆ. ಸೂರತ್ ನಿವಾಸಿಯಾಗಿರುವ ಸಾವ್ಜಿ ಧೋಲಾಕಿಯಾ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪಡೆದಿದ್ದಾರೆ. ಕುಟುಂಬ ಸದಸ್ಯರು ಹೆಲಿಕಾಪ್ಟರ್ ಅನ್ನು ಉಡುಗೊರೆಯಾಗಿ ನೀಡಿದ್ದರು. 50 ಕೋಟಿ ರೂ.ಬೆಲೆಯ ಹೊಚ್ಚಹೊಸ ಹೆಲಿಕಾಪ್ಟರ್ನ್ನು ಅವರು, ಸೂರತ್ನ ವೈದ್ಯಕೀಯ ಮತ್ತು ಇತರ ತುರ್ತು ಪರಿಸ್ಥಿತಿಗಳಿಗಾಗಿ ಕೊಡುಗೆಯಾಗಿ ನೀಡುವ ಮೂಲಕವಾಗಿ ಎಲ್ಲಡೆ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ
ಧೋಲಾಕಿಯಾ ಅವರು ಕೆಲವು ದಿನಗಳಿಂದ ಸೂರತ್ನ ಜನರಿಗೆ ಹೆಲಿಕಾಪ್ಟರ್ ಉಡುಗೊರೆಯಾಗಿ ನೀಡಲು ಯೋಜಿಸಿದ್ದರು. ಆದರೆ ಆಶ್ಚರ್ಯಕರ ರೀತಿಯಲ್ಲಿ ಹೆಲಿಕಾಪ್ಟರ್ನ್ನೇ ಉಡುಗೊರೆಯನ್ನು ಸ್ವೀಕರಿಸಿದ ನಂತರ ಅವರು ಅದನ್ನೇ ಸೂರತ್ ಜನತೆಗೆ ಕೊಡುಗೆಯಾಗಿ ನೀಡಿದ್ದಾರೆ.
ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೂರತ್ ಗುಜರಾತ್ನ ಆರ್ಥಿಕ ರಾಜಧಾನಿಯಾಗಿದೆ. ಆದರೆ ತನ್ನದೇ ಆದ ಹೆಲಿಕಾಪ್ಟರ್ ಹೊಂದಿಲ್ಲ. ಹೀಗಾಗಿ, ನಾನು ಈ ಉಡುಗೊರೆಯನ್ನು ಸೂರತ್ನ ಜನರಿಗೆ ಮತ್ತು ಸಾಮಾಜಿಕ ಉದ್ದೇಶಕ್ಕಾಗಿ ಅರ್ಪಿಸುತ್ತಿದ್ದೇನೆ. ನನ್ನ ಕುಟುಂಬವು ಇಷ್ಟು ದೊಡ್ಡ ಆಶ್ಚರ್ಯಕರ ಉಡುಗೊರೆಯನ್ನು ನೀಡುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ಕುಟುಂಬದಿಂದ ಉಡುಗೊರೆಯನ್ನು ನಾನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ನಾನು ಅದನ್ನು ಸಾಮಾಜಿಕ ಉದ್ದೇಶಕ್ಕಾಗಿ ಕೊಡುಗೆಯಾಗಿ ನೀಡಲು ನಿರ್ಧರಿಸಿದೆ. ತಮ್ಮ ಜೀವನವನ್ನು ನೀರಿನ ಸಂರಕ್ಷಣೆ ಮತ್ತು ಕೊಳಗಳನ್ನು ನಿರ್ಮಿಸಲು ಮುಡಿಪಾಗಿಟ್ಟ ಧೋಲಾಕಿಯಾ ಹೇಳಿದ್ದಾರೆ.