ಕೊಪ್ಪಳ: ಯಾರನ್ನೂ ಸೋಲಿಸುವುದು ನಮ್ಮ ಅಜೆಂಡಾ ಅಲ್ಲ. ಮುಂದಿಟ್ಟ ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಬೇರೆ ಪಕ್ಷಕ್ಕೆ ತೊಂದರೆ ಮಾಡಬೇಕು ಎನ್ನುವ ಉದ್ದೇಶ ನನಗಿಲ್ಲ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಹೇಳಿದರು.
ಕೊಪ್ಪಳದ (Koppala) ಗಂಗಾವತಿಯಲ್ಲಿ (Gangavathi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರೆಂಟು ಜನ ನನ್ನ ಬಗ್ಗೆ ಮಾತನಾಡಿದರೂ ನಾನು ಯಾರಿಗೂ ಕಾಮೆಂಟ್ ಮಾಡುವುದಿಲ್ಲ. ನಾನು ನನ್ನ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ಅದರಿಂದ ಯಾರಿಗೆ ಲಾಭ ಯಾರಿಗೆ ನಷ್ಟ ಎಂದು ಯೋಚನೆ ಮಾಡುವುದಿಲ್ಲ. 31 ಕ್ಷೇತ್ರದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. 9 ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆಯನ್ನು ಮಾಡಿದ್ದೇವೆ. ಜನರ ಪರವಾಗಿ ಕೆಲಸ ಮಾಡುವ ಚಿಂತನೆಯನ್ನು ಇಟ್ಟುಕೊಂಡಿದ್ದೇವೆ. ಅಮಿತ್ ಶಾ (Amit Shah) ಅವರು ಯಾಕೆ ಹೀಗೆ ಹೇಳಿದ್ದಾರೆ ಎನ್ನುವುದನ್ನು ನೀವೇ ವಿಶ್ಲೇಷಣೆ ಮಾಡಬೇಕು ಎಂದು ಟಾಂಗ್ ನೀಡಿದರು.
ಕಳೆದ ವಾರ ಸಂಡೂರಿನಲ್ಲಿ ನಡೆದ ಸಭೆಯಲ್ಲಿ ರೆಡ್ಡಿ ಬಗ್ಗೆ ಸ್ಥಳೀಯ ಶಾಸಕರು ಅಮಿತ್ ಶಾ ಅವರಿಗೆ ದೂರು ನೀಡಿದ್ದರು. ಈ ಕುರಿತು ಅಮಿತ್ ಶಾ ರೆಡ್ಡಿ ಬಗ್ಗೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದರು.
ಮಾರ್ಚ್ 5ರಿಂದ ನಾನು ರಾಜ್ಯ ಪ್ರವಾಸ ಹಮ್ಮಿಕೊಳ್ಳುತ್ತೇನೆ. ನಾನು ಗಂಗಾವತಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಯಾರಿಗಾದರೂ ಕನಸು ಬಿದ್ದಿದ್ದರೆ ನಾನು ಏನು ಮಾಡಲಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಭಯದಿಂದ ಸರ್ಕಾರಿ ನೌಕರರ ಸಂಬಳ ಹೆಚ್ಚಳ: ಕ್ರೆಡಿಟ್ ತೆಗೆದುಕೊಂಡ ಡಿಕೆಶಿ
ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರ ಕ್ರೆಡಿಟ್ ಎರಡೂ ಪಾರ್ಟಿಯವರು ತೆಗೆದುಕೊಳ್ಳುತ್ತಿದ್ದಾರೆ. ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ ಇದಕ್ಕೆ ಅನುದಾನ ನೀಡಿದ್ದೆ. ಆ ಗುಡ್ಡ ಹತ್ತುವುದಕ್ಕೂ ಆಗುತ್ತಿರಲಿಲ್ಲ. ನಾನು ಬಿಜೆಪಿ ಸರ್ಕಾರದಲ್ಲಿದ್ದಾಗ 11 ಕೋಟಿ ವೆಚ್ಚದಲ್ಲಿ ಈ ಪ್ರಾಜೆಕ್ಟ್ ರೆಡಿ ಮಾಡಿದ್ದೆವು. ನಾನು ಮಾಡಿದ ಅಭಿವೃದ್ಧಿ ಕೆಲಸಗಳೇ ಜನ ನನ್ನನ್ನು ನಂಬುವಂತೆ ಮಾಡಿದೆ ಎಂದರು.
ಬಿ.ಎಸ್ ಯಡಿಯೂರಪ್ಪ (BS Yediyurappa) ಅವರ ವಿಚಾರವಾಗಿ ಮಾತನಾಡಿದ ಅವರು, ಬಿಎಸ್ವೈ ಅವರು ರಾಜಕೀಯದಲ್ಲಿರಬೇಕು. ಅವರು ಮತ್ತೆ ಚುನಾವಣೆಗೆ ನಿಲ್ಲಬೇಕು. ಅವರು ನಿವೃತ್ತಿ ತೆಗೆದುಕೊಳ್ಳಬಾರದು. ಅವರಿಂದ ಇಡೀ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ನಾನು ಸಚಿವನಾಗಿದ್ದಾಗ ಅಭಿವೃದ್ಧಿ ಕೆಲಸಕ್ಕೆ ಬಹಳ ಸಹಾಯ ಮಾಡಿದ್ದರು. ರಾಜ್ಯದ ವಿಮಾನ ನಿಲ್ದಾಣಗಳ ಕೆಲಸ ಆಗಿರುವುದೇ ಆ ಸಮಯದಲ್ಲಿ. ಅಂತಹ ಮಹಾನ್ ವ್ಯಕ್ತಿ ವಿಧಾನಸಭೆಗೆ ಬರಬೇಕು. ಮತ್ತೆ ಹುಟ್ಟಬೇಕು ಎಂದರೆ ಯಡಿಯೂರಪ್ಪನವರೇ ಹುಟ್ಟಬೇಕು. 80 ವರ್ಷ ವಯಸ್ಸಾದರೂ ನಮ್ಮನ್ನು ಮೀರಿಸುವ ಹಾಗೆ ಕೆಲಸ ಮಾಡುತ್ತಾರೆ. ಅವರು ಯಾಕೆ ಬಿಟ್ಟರು ಎನ್ನುವ ಬಗ್ಗೆ ಮಾತನಾಡುವುದಿಲ್ಲ. ಬಿಎಸ್ವೈ ಅವರು ಈ ರಾಜ್ಯಕ್ಕೆ ಬೇಕು ಎಂದು ಅವರ ಕಾರ್ಯಗಳನ್ನು ಶ್ಲಾಘಿಸಿದರು. ಇದನ್ನೂ ಓದಿ: ನನಗೆ, ಕುಮಾರ ಬಂಗಾರಪ್ಪಗೆ ಇನ್ಮುಂದೆ ಅಣ್ಣ-ತಮ್ಮ ಎಂದು ಕರೆಯಬೇಡಿ : ಮಧು ಬಂಗಾರಪ್ಪ