ಬಳ್ಳಾರಿ: ಮೊಹರಂ ಮೆರವಣಿಗೆ ವೀಕ್ಷಣೆ ವೇಳೆ ಮನೆಯ ಮೇಲ್ಛಾವಣೆ ಕುಸಿದ ಪರಿಣಾಮ ಓರ್ವ ಬಾಲಕಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ ಹೊಸಪೇಟೆ ಪಟ್ಟಣದ ಚಿತ್ತವಾಡಗಿಯಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ 5 ಗಂಟೆಗೆ ಈ ಘಟನೆ ನಡೆದಿದೆ. ಚಿತ್ತವಾಡಗಿಯಲ್ಲಿ ಮೊಹರಂ ವೀಕ್ಷಣೆಗಾಗಿ ಮನೆಯ ಮೇಲ್ಛಾವಣೆ ಏರಿ ಕುಳಿತಿದಿದ್ದರು. ನೂರಕ್ಕೂ ಅಧಿಕ ಜನರು ಮೇಲ್ಛಾವಣೆ ಮೇಲೆ ಹತ್ತಿದ್ದರಿಂದ ಮಾಳಿಗೆ ಕುಸಿದಿದೆ. ಕೂಡಲೇ ಮೇಲ್ಛಾವಣೆ ಮೇಲೆ ಕುಳಿತಿದ್ದ ಜನರು ಕೆಳಗೆ ಕುಸಿದಿದ್ದಾರೆ. ಕೂಡಲೇ ಸ್ಥಳೀಯರು ಅವಶೇಷಗಳಡಿ ಸಿಲುಕಿದ್ದ ಜನರನ್ನು ರಕ್ಷಿಸಿದ್ದಾರೆ.
ಎಲ್ಲ ಗಾಯಾಳುಗಳನ್ನು ಹೊಸಪೇಟೆಯ ಸರ್ಕಾರಿ ನೂರು ಹಾಸಿಗೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾವನ್ನಪ್ಪಿದ ಬಾಲಕಿಯನ್ನು 14 ವರ್ಷದ ಉಷಾ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಚಿತ್ತವಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv