ವಿಜಯನಗರ: ಜಿಲ್ಲೆಯ ಹೊಸಪೇಟೆ ನಗರವನ್ನು ಬೆಚ್ಚಿ ಬೀಳಿಸಿದ್ದ ವೃದ್ಧೆಯ ಕೊಲೆ ಹಾಗೂ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಹೊಸಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಕ್ಟೋಬರ್ 22 ರಂದು ವಿಜಯನಗರ ಜಿಲ್ಲೆ ಹೊಸಪೇಟೆಯ ರಾಣಿಪೇಟೆಯಲ್ಲಿ ಬಟ್ಟೆ ಖರೀದಿ ಮಾಡುವ ನೆಪದಲ್ಲಿ ಭುವನೇಶ್ವರಿ (68) ವರ್ಷದ ವೃದ್ಧೆಯನ್ನು ಕೊಲೆ ಮಾಡಿ, ಅವರ ತಂಗಿ ಶಿವಭೂಷಣ ಎನ್ನುವವರನ್ನು ಗಾಯಗೊಳಿಸಿ ಮನೆಯಲ್ಲಿದ್ದ ಮೂರು ಲಕ್ಷ ಹಣ ಹಾಗೂ ಮೂರು ಲಕ್ಷ ಮೂವತ್ತು ಸಾವಿರ ಮೌಲ್ಯದ ಬಂಗಾರವನ್ನು ದರೋಡೆ ಮಾಡಲಾಗಿತ್ತು. ಇದನ್ನೂ ಓದಿ: ಭಾನುವಾರ ಬೆಳಗ್ಗೆ 5:30ರಿಂದ ಪುನೀತ್ ರಾಜ್ಕುಮಾರ್ ಅಂತಿಮಯಾತ್ರೆ
ಈ ಪ್ರಕರಣ ಬೇಧಿಸಲು ವಿಜಯನಗರ ಜಿಲ್ಲಾ ಎಸ್ಪಿ ಕೆ ಅರುಣ್, ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ್ ಕುಲಕರ್ಣಿ, ನಗರ ಠಾಣೆ ಸಿಪಿಐ ಶ್ರೀನಿವಾಸ್ ರಾವ್, ಚಿತ್ತವಾಡ್ಗಿ ಸಿಪಿಐ ಜಯಪ್ರಕಾಶ್ ನೇತೃತ್ವದಲ್ಲಿ ಮೂರು ತಂಡ ರಚಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಎಂಟು ದಿನ ಕಳೆಯುವುದರೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ತಂದೆ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ
ಬಂಧಿತ ಆರೋಪಿಗಳನ್ನು ತರಕಾರಿ ವ್ಯಾಪಾರಿ ತೈಬುಜುಲ್ಲಾ(52), ನಾಗರಾಜ್(26), ಬೀರಪ್ಪ(25), ಗೀತಾ(35), ಪ್ರಮೀಳಾ (38) ಎಂದು ಗುರುತಿಸಲಾಗಿದೆ. ಬಂಧಿತರು ಅಂತರ್ ಜಿಲ್ಲಾ ನಿವಾಸಿಗಳಾಗಿದ್ದು, ಬಂಧಿತರಿಂದ ಕಳ್ಳತನ ಮಾಡಿರುವ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಕೆಲವರು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಇದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ವಿಜಯನಗರ ಎಸ್ಪಿ ಕೆ. ಅರುಣ್ ತಿಳಿಸಿದ್ದಾರೆ.