ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ (Gokarna) ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ 1.38 ಕೋಟಿ ತೆರಿಗೆ ಕಟ್ಟುವಂತೆ ಆದಾಯ ತೆರಿಗೆ (Income Tax) ಇಲಾಖೆ ದೇವಸ್ಥಾನದ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.
2015-16ನೇ ಸಾಲಿನಲ್ಲಿ ರಾಮಚಂದ್ರಾಪುರ ಮಠದಿಂದ (Ramachandrapur Mutt) ದೇವಸ್ಥಾನದ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಹಣಕಾಸಿನ ವ್ಯವಹಾರದಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆ ಆಡಳಿತ ಮಂಡಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಈ ಕುರಿತು ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ (B N Sri Krishna) ಅವರ ನೇತೃತ್ವದಲ್ಲಿ ಇರುವ ದೇವಸ್ಥಾನ ಆಡಳಿತ ಮಂಡಳಿಯು ತುರ್ತಾಗಿ ಆನ್ ಲೈನ್ ಮೂಲಕ ದೇವಸ್ಥಾನ ಉಸ್ತುವಾರಿ ಸಮಿತಿ ಸಭೆ ನಡೆಸಿದೆ. ಈ ಸಭೆಯಲ್ಲಿ ತಕ್ಷಣದಲ್ಲಿ ದಂಡ ಪಾವತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಿದರು.
ಈ ಕುರಿತು ಮಾತನಾಡಿದ ಕಮಿಟಿ ಸದಸ್ಯರೂ ಆಗಿರುವ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಹಿಂದೆ ಹಲವು ದೋಷಗಳು ಆಗಿದ್ದವು. ಇವುಗಳನ್ನು ಸರಿಪಡಿಸಿ ದೇವಸ್ಥಾನ ಕಾರ್ಯಗಳು ಸುಗಮವಾಗಿ ನಡೆದುಕೊಂಡು ಹೋಗಲು ಬೇಕಾದ ಎಲ್ಲಾ ಕಾರ್ಯವನ್ನು ಮಾಡಲಾಗುತ್ತದೆ. ಜೊತೆಗೆ ಆಡಳಿತದ ಲೆಕ್ಕಪತ್ರ ನಿರ್ವಹಣೆಗೆ ಲೆಕ್ಕಾಧಿಕಾರಿಯನ್ನು ನೇಮಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
Web Stories