ಕಾರವಾರ: ಇಲ್ಲಿಯವರೆಗೆ ಬ್ರಿಟಿಷರ ಮೆಕಾಲೆ ಶಿಕ್ಷಣ ವ್ಯವಸ್ಥೆಯಿತ್ತು. ಈಗ ಅದನ್ನು ತೆಗೆದು ದೇಶದ ಸಂಸ್ಕೃತಿಯ ವಿಚಾರಗಳ ಬಗ್ಗೆ ಪಠ್ಯವನ್ನಿಡುವ ಕೆಲಸ ಮಾಡಲಾಗುತ್ತಿದೆ. ಪಠ್ಯದಲ್ಲಿ ಚಕ್ರವರ್ತಿ ಸೂಲಿಬೆಲೆಯನ್ನು ಸಾಹಿತಿ ಎಂದು ಪರಿಚಯಿಸಿರುವುದು ತಪ್ಪೇನು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶಟ್ಟರ್ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆಯವರು ಹಿಂದುತ್ವದ ಬಗ್ಗೆ ಅಥವಾ ಸಂಸ್ಕೃತಿಯ ಬಗ್ಗೆ ಮಾತನಾಡಿದರೆ ಅವರನ್ನು ಸಾಹಿತಿ ಎನ್ನಬಾರದೇ? ಅವರನ್ನು ಸಾಹಿತಿ ಎನ್ನುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕದ ಪರಿಷ್ಕರಣೆ- ಅನುಮತಿ ಹಿಂತೆಗೆದುಕೊಂಡ ಮತ್ತಿಬ್ಬರು ಸಾಹಿತಿಗಳು
ಇದೇ ವೇಳೆ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಶೆಟ್ಟರ್ ಅವರು, ಚುನಾವಣೆಯಲ್ಲಿ ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಈಗಾಗಲೇ ಮತಗಳನ್ನ ಹೇಗೆ ಪಡೆಯಬೇಕೆಂಬ ಪ್ರಯತ್ನ ಮಾಡಲಾಗುತ್ತಿದೆ. 2-3 ಮೂರು ದಿನಗಳಲ್ಲಿ ಎಲ್ಲವೂ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಆರ್ಎಸ್ಎಸ್ ಬಗ್ಗೆ ಮಾತನಾಡದೇ ಇದ್ದರೆ ತಿಂದದ್ದು ಅರಗುವುದಿಲ್ಲ. ಆರ್ಎಸ್ಎಸ್ಗೆ ಬೈಯ್ದರೆ ಅಲ್ಪಸಂಖ್ಯಾತರ ಮತಗಳನ್ನು ಪಡೆಯಬಹುದು ಎನ್ನುವ ಮನೋಭಾವ ಅವರದ್ದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆ ದೇವರು ನಿನಗೆ ಒಳ್ಳೆ ಬುದ್ಧಿ ಕೊಡಲಿ – ಹಿಜಬ್ ವಿದ್ಯಾರ್ಥಿನಿಗೆ ಖಾದರ್ ತಿರುಗೇಟು
ಅಲ್ಪಸಂಖ್ಯಾತರ ಓಲೈಕೆಗೆ ಆರ್ಎಸ್ಎಸ್ ಟೀಕೆ ಮಾಡುವುದು ಬಹಳ ದಿನ ನಡೆಯುವುದಿಲ್ಲ. ಇಡೀ ದೇಶದಲ್ಲಿ ಹಿಂದೂ ಸಂಘಟನೆ ಒಂದು ಮಾಡುವ ಕೆಲಸ ಆರ್ಎಸ್ಎಸ್ ಮಾಡಿದೆ. ಆರ್ಎಸ್ಎಸ್ ಬಗ್ಗೆ ಕೀಳು ಮಟ್ಟದಲ್ಲಿ ಸಿದ್ದರಾಮಯ್ಯ ಮಾತನಾಡಿ ಸಣ್ಣವರಾಗಿದ್ದಾರೆ ಎಂದು ಕುಟುಕಿದ್ದಾರೆ.