ಕೋಲಾರ: ಸಮಾಜದಲ್ಲಿ ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಗೂ ಉಗ್ರರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ಮುಬಾರಕ್ ಆರೋಪ ಮಾಡಿದ್ದಾರೆ.
ಕೋಲಾರ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಲ್ಲಿನ ನಗರಸಭೆಯ 9 ಜನ ಜೆಡಿಎಸ್ ಸದಸ್ಯರು, ರಾಜ್ಯದ ನಾಯಕ ಎಂದು ಹೇಳಿಕೊಂಡು ವೇದಿಕೆ ಕಾರ್ಯಕ್ರಮಗಳಲ್ಲಿ ಜಾತಿಗಳ ಬಗ್ಗೆ ಮಾತನಾಡುತ್ತಾ ಅರೆ ಹುಚ್ಚನಂತೆ ವರ್ತಿಸುತ್ತಿದ್ದಾರೆ. ಅವರನ್ನ ಕೆಲವು ಭಾಗಗಳಲ್ಲಿ ಜೋಕರ್ ಮಾದರಿಯಲ್ಲಿ ನೋಡಲಾಗುತ್ತಿದೆ ಎಂದು ಆರೋಪಿಸಿದ್ರು.
ಬಾಯಿಗೆ ಬಂದಂತೆ ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಶಾಸಕ ವರ್ತೂರು ಪ್ರಕಾಶ್ ಒಬ್ಬ ಕಾಮಿಡಿಯನ್ ಎಂದು ವ್ಯಂಗ್ಯವಾಡಿದ ಅವರು, 15 ತಿಂಗಳ ಹಿಂದೆ ಪೈಪ್ ಲೈನ್ ಅಳವಡಿಸಿ ಕೋಲಾರ ನಗರಕ್ಕೆ ನೀರು ಕೊಡುತ್ತೇನೆ ಎಂದ ಶಾಸಕ ವರ್ತೂರು ಪ್ರಕಾಶ್ ಇದುವರೆಗೂ ನೀರು ಕೊಟ್ಟಿಲ್ಲ. ಈಗಾಗಲೇ ಕೆರೆ ಕುಂಟೆಗಳು ತುಂಬಿ, ಕೊಳವೆ ಬಾವಿಗಳಲ್ಲಿ ನೀರು ಇದ್ರೂ ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ ಇಂದಿಗೂ ನೀರಿಗೆ ಬರ ಇದೆ. ಟ್ಯಾಂಕರ್ ನೀರು ನಿಲ್ಲಿಸಿರುವುದರಿಂದ ನಗರದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಇದನ್ನ ಬಳಸಿಕೊಂಡು ವೋಟ್ಗಾಗಿ ನಮ್ಮ ಕಾಂಗ್ರೆಸ್ ಮೂಲಕ ಟ್ಯಾಂಕರ್ ನೀರು ಪೂರೈಕೆ ಮಾಡಿ ಗಿಮಿಕ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ರು.