ಮಂಡ್ಯ: ಪ್ರಚಾರಕ್ಕೆ ಹೋದ ಮೈತ್ರಿ ಪಕ್ಷದ ಲೋಕಸಭಾ ಚುನಾವಣೆ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ನಿಖಿಲ್ ಪ್ರಚಾರಕ್ಕೆಂದು ಸಾರಂಗಿಗೆ ಬಂದಿದ್ದರು. ಈ ವೇಳೆ ಪ್ರಚಾರಕ್ಕೆ ಬಂದ ನಿಖಿಲ್ಗೆ ಸಾರಂಗಿ ಗ್ರಾಮದ ಮಹಿಳೆಯೊಬ್ಬರು ನಿಮಗೆ ವೋಟ್ ಹಾಕಿ ಎಂದು ಕೇಳುವವರಲ್ಲಿ ನಾನೂ ಒಬ್ಬಳು. ಆದರೆ ನಮ್ಮ ಊರಿನ ಚರಂಡಿ, ರಸ್ತೆ ನೋಡಿ ಎಂದು ಅಳಲು ತೋಡಿಕೊಂಡರು.
ಮಹಿಳೆ ಅಳಲನ್ನು ತೋಡಿಕೊಳ್ಳುವ ವೇಳೆ ಜೆಡಿಎಸ್ ಮುಖಂಡರು ಅವರನ್ನು ಸಮಾಧಾನ ಪಡಿಸಲು ಮುಂದಾದರು. ಈ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಸಮಸ್ಯೆಯನ್ನು ಹೇಳಲಿ ಬಿಡಿ ಎಂದು ಮುಖಂಡರನ್ನು ಸುಮ್ಮನಿರಿಸಿದರು. ಆಗ ಮಹಿಳೆ ಇಂದು ಈ ರಸ್ತೆ, ಚರಂಡಿ ನಾನು ಸ್ವಚ್ಛಗೊಳಿಸಿದ್ದೇನೆ. ನಮ್ಮ ಊರಿನ ಪರಿಸ್ಥಿತಿ ನಿಮಗೆ ತಿಳಿಯಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಸಮಸ್ಯೆ ಬಗೆಹರಿಸೋದಾಗಿ ಎಂದು ನಿಖಿಲ್ ಮಹಿಳೆಗೆ ಭರವಸೆ ನೀಡಿದರು. ನಂತರ ನಾನು ಹೋಗಬಹುದೇ ಎಂದು ಮಹಿಳೆ ಬಳಿ ಕೇಳಿಕೊಂಡರು. ಮಹಿಳೆ ಸಮಸ್ಯೆ ಕೇಳಿ ನಿಖಿಲ್ ಮುಂದೆ ಸಾಗಿದರು.