– ಸಂವಿಧಾನ ಬದಲವಾಣೆಗೆ ಕೈಹಾಕಿದರೆ ರಕ್ತಪಾತವಾಗುತ್ತೆ
– 30ಕಿ.ಮೀಗೊಂದು ಜಿಲ್ಲೆ ಮಾಡೋಕಾಗುತ್ತಾ?
ಮೈಸೂರು: ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರನ್ನು ಮರೆತರೆ ನಮಗೆ ನಾವೇ ಅನ್ಯಾಯ ಮಾಡಿಕೊಂಡಂತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಟಿ.ನರಸೀಪುರದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಿ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ರಾಜಕೀಯ ಸ್ವಾತಂತ್ರ್ಯ ಕೇವಲ ಮತ ಹಾಕುವಾಗ ಮಾತ್ರ ಇರುತ್ತದೆ. ನಾವೆಲ್ಲ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ದೇಶದಲ್ಲಿ ಸಂವಿಧಾನ ಬದಲಾವಣೆ ಮಾಡಲು ಯಾರಾದರೂ ಹೋದರೆ ರಕ್ತಪಾತವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಂಬೇಡ್ಕರ್ ಒಂದು ಜಾತಿಗೆ ಸಿಮೀತವಾಗಿಲ್ಲ. ಒಂದೇ ಜಾತಿಗೋಸ್ಕರ ಅವರು ಕೆಲಸ ಮಾಡಿಲ್ಲ. ಎಲ್ಲಾ ಶೋಷಿತರ ಪರವಾಗಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಯಾವ ದಲಿತರು ಬಂದು ಕೇಳಿರಲಿಲ್ಲ. ಆದರೂ ಎಸ್ಸ್ಸಿ ಎಸ್ಟಿಗೆ ಹಣವನ್ನು ಮೀಸಲಿಟ್ಟು ಅವರ ಪರ ನಿಂತೆ. ಇದೆಲ್ಲ ನಮ್ಮ ಸರ್ಕಾರ ದಲಿತರ ಪರವಾಗಿ ಮಾಡಿರುವ ಮಹತ್ಕಾರ್ಯಗಳು ಎಂದು ತಿಳಿಸಿದರು. ಇದನ್ನು ಓದಿ: ಮೈಸೂರು ವಿಭಜನೆ ಆಗಬೇಕು- ಹೆಚ್ ವಿಶ್ವನಾಥ್
ಇದೇ ವೇಳೆ ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, 30 ಕಿ.ಮೀಗೊಂದು ಜಿಲ್ಲೆ ಮಾಡೋಕಾಗುತ್ತಾ? ಈಗ ಮೈಸೂರು ಜಿಲ್ಲೆ ವಿಭಜನೆ ಅಗತ್ಯವಿಲ್ಲ. ಇರೋದೆ ಆರು ತಾಲೂಕು. ಅದನ್ನು ಮೂರು ಮೂರು ಮಾಡೋಕೆ ಆಗುತ್ತ. ಇದು ವೈಜ್ಞಾನಿಕವಾಗಿಯು ಸರಿಯಲ್ಲ, ಇದು ಒಳ್ಳೆ ಬೆಳವಣಿಗೆಯೂ ಅಲ್ಲ. ವೈಯುಕ್ತಿಕವಾಗಿ ನನಗೆ ಪ್ರತ್ಯೇಕ ಜಿಲ್ಲೆ ಮಾಡುವುದು ಇಷ್ಟ ಇಲ್ಲ ಎಂದು ಹೇಳಿದರು.
ನಾನು ಈ ವಿಚಾರವಾಗಿ ವಿಶ್ವನಾಥ್ ಹೇಳಿಕೆಯನ್ನು ನೋಡಿಲ್ಲ, ಮಂಜುನಾಥ್ ಹೇಳಿಕೆಯನ್ನೂ ನೋಡಿಲ್ಲ. ಈಗ ಉಪಚುನಾವಣೆ ಇದೆ, ಅದಕ್ಕೆ ಬಹುಶಃ ಅವರು ಮಾತನಾಡುತ್ತಿರಬಹುದು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.