– ನನ್ನ ಮಗ ದೇಶ ಸೇವೆಯಲ್ಲ, ವಿಶ್ವಸೇವೆ ಮಾಡ್ತಿದ್ದಾನೆ
– ಎರಡು ತಿಂಗಳಿನಿಂದ ಕೊರೊನಾಗೆ ವಾಕ್ಸಿನ್ ಸಂಶೋಧನೆ
ಮೈಸೂರು: ಕೊರೊನಾ ವೈರಸ್ಗೆ ಔಷಧ ಕಂಡು ಹಿಡಿಯಲು ಯುರೋಪಿಯನ್ ರಾಷ್ಟ್ರಗಳು ನೇಮಿಸಿದ ತಂಡದಲ್ಲಿ ಕನ್ನಡಿಗ ಡಾ. ಮಹದೇಶ್ ಪ್ರಸಾದ್ ಅವರಿಗೆ ಸ್ಥಾನ ಸಿಕ್ಕಿದ್ದು ತಾಯಿ ಸಂತಸಗೊಂಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಹದೇಶ್ ಪ್ರಸಾದ್ ಅವರ ತಾಯಿ ರತ್ನಮ್ಮ, ನನ್ನ ಮಗ ಕೊರೊನಾಗೆ ಔಷಧ ಕಂಡು ಹಿಡಿಯುವ ತಂಡದಲ್ಲಿ ಸ್ಥಾನ ಪಡೆದಿರುವುದು ನನಗೆ ಖುಷಿಯಿದೆ ಹಾಗೂ ತುಂಬಾ ಹೆಮ್ಮೆ ಇದೆ. ನಾವು ಮೂಲತಃ ಹಾಸನದ ಅರಕಲಗೂಡಿನವರಾಗಿದ್ದು, ನನ್ನ ಮಗ ಸರ್ಕಾರಿ ಶಾಲೆಯಲ್ಲಿ ಎಲ್ಲಾ ಹಂತದ ಶಿಕ್ಷಣವನ್ನು ಮುಗಿಸಿದ್ದಾನೆ. ಬಿಎಸ್ಸಿ ಹಾಸನದ ಸರ್ಕಾರಿ ಕಾಲೇಜಿನಲ್ಲಿ ಓದಿದ್ದಾನೆ. ಎಂಎಸ್ಸಿ ಹಾಗೂ ಪಿಎಚ್ಡಿ ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡಿದ್ದಾನೆ ಎಂದರು. ಇದನ್ನೂ ಓದಿ: ಕೊರೊನಾ ವೈರಸ್ಗೆ ವಾಕ್ಸಿನ್ ಕಂಡು ಹಿಡಿಯುವ ತಂಡದಲ್ಲಿ ಕನ್ನಡಿಗ
ಮಹದೇಶ್ ಈಗ ಯೂರೋಪ್ನ ಬೆಲ್ಜಿಯಂ ದೇಶದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಕೊರೊನಾಗೆ ವಾಕ್ಸಿನ್ ಕಂಡು ಹಿಡಿಯುವ ತಂಡದಲ್ಲಿ ಸ್ಥಾನ ಪಡೆದಿದ್ದೇನೆ ಎಂದು ಹೇಳಿದ್ದನು. ಅಲ್ಲದೆ ಎರಡು ತಿಂಗಳಿನಿಂದ ನಾನು ಕೊರೊನಾ ವಾಕ್ಸಿನ್ ಸಂಶೋಧನೆ ಮಾಡುತ್ತಿದ್ದೇನೆ ಎಂದು ಹೇಳಿದ್ದನು. ಆಗ ನಾನು ತುಂಬಾ ಸಂತೋಷಗೊಂಡು, ಮುಂದುವರಿಸು ಎಂದು ಹೇಳಿದ್ದೆ. ಎರಡು ತಿಂಗಳ ಹಿಂದೆಯಷ್ಟೇ ಮಹದೇಶ್ ಭಾರತಕ್ಕೆ ಬಂದಿದ್ದನು. ಈ ವೇಳೆ ತಂಡದಲ್ಲಿ ಕೆಲಸ ಮಾಡುತ್ತೇನೆ ಅಂತ ಹೇಳಿದ್ದನು ಎಂದು ಮಹದೇಶ್ ತಾಯಿ ಹೇಳಿದರು.
ನನ್ನ ಮಗ ಕೊರೊನಾಗೆ ಔಷಧಿ ಕಂಡು ಹಿಡಿಯುವ ತಂಡದಲ್ಲಿ ಕೆಲಸ ಮಾಡುತ್ತಿರುವುದರಿಂದ ನನಗೆ ಆತಂಕ ಇಲ್ಲ. ಈಗಾಗಲೇ ಕೊರೊನಾ ವೈರಸ್ ಇಡೀ ವಿಶ್ವದಲ್ಲಿ 5 ಸಾವಿರ ಜನರನ್ನು ಬಲಿ ಪಡೆದುಕೊಂಡಿದೆ. ಅಂತಹದರಲ್ಲಿ ನನ್ನ ಮಗ ಔಷಧಿ ಕಂಡು ಹಿಡಿದರೆ ಎಷ್ಟೋ ಜನರ ಪ್ರಾಣ ಉಳಿಯುತ್ತೆ ಎಂಬ ಖುಷಿ ಹಾಗೂ ಹೆಮ್ಮೆ ನನಗಿದೆ. ನನ್ನ ಮಗ ಔಷಧಿ ಕಂಡು ಹಿಡಿದು ಕೋಟ್ಯಂತರ ಜನರಿಗೆ ಉಪಯೋಗ ಆಗಲಿ ಎಂಬುದು ನಮ್ಮ ಆಶಯ ಎಂದರು.
ಮಹದೇಶ್ ಪಿಎಚ್ಡಿ ಮುಗಿದ ಮೇಲೆ ಜರ್ಮನಿಯಲ್ಲಿ ಹಲವು ವರ್ಷಗಳ ಕಾಲ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದ್ದಾನೆ. ಆದಾದ ಬಳಿಕ ಯುಎಸ್ಎ, ಸ್ವೀಡನ್ನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾನೆ. ಇದೀಗ ಬೆಲ್ಜಿಯಂನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾನೆ. ನನಗೆ ದಿನಕ್ಕೆ ಎರಡು ಬಾರಿ ಕರೆ ಮಾಡುತ್ತಾನೆ. ಈ ವೇಳೆ ವ್ಯಾಕ್ಸಿನ್ ಕಂಡು ಹಿಡಿಯಲು ತುಂಬಾ ಶ್ರಮಪಡುತ್ತಿದ್ದೇವೆ. ಔಷಧಿ ಕಂಡು ಹಿಡಿದೇ ಹಿಡಿಯುತ್ತೇವೆ ಎಂದು ಹೇಳುತ್ತಾನೆ ಎಂದು ತಿಳಿಸಿದರು.
ನನ್ನ ಮಗ ಆರೋಗ್ಯವಾಗಿದ್ದು, ಆತನ ಪತ್ನಿ ಹಾಗೂ ಮಗು ಅಲ್ಲಿಯೇ ವಾಸಿಸುತ್ತಿದ್ದಾರೆ. ಅವರು ಕೂಡ ಆರೋಗ್ಯವಾಗಿದ್ದು, ನನಗೆ ಯಾವುದೇ ಆತಂಕವಿಲ್ಲ. ನನ್ನ ಮಗ ದೇಶ ಸೇವೆಯಲ್ಲ, ಇಡೀ ವಿಶ್ವ ಸೇವೆ ಮಾಡುತ್ತಿದ್ದಾನೆ. ಇದರಿಂದ ನನಗೆ ತುಂಬಾ ಹೆಮ್ಮೆ ಇದೆ. ನಮಗೆ ಖಂಡಿತ ಯಾವುದೇ ಸ್ವಾರ್ಥ ಇಲ್ಲ. ನಮ್ಮ ಮಕ್ಕಳು ದೇಶ ಸೇವೆ ಮಾಡಬೇಕೆಂದು ಚಿಕ್ಕ ವಯಸ್ಸಿನಿಂದಲೂ ಅವರಿಗೆ ಹೇಳಿಕೊಟ್ಟಿದ್ದೆವು. ನನ್ನ ಮಕ್ಕಳು ವಿಜ್ಞಾನಿಗಳಾಗಬೇಕು ಎಂದು ನಾನು ಬಯಸಿದ್ದೆ. ಹಾಗೆಯೇ ನನ್ನ ಇಬ್ಬರು ಮಕ್ಕಳು ವಿಜ್ಞಾನಿಗಳಾಗಿದ್ದಾರೆ. ನನ್ನ ಕಿರಿಯ ಮಗ ಯೂರೋಪ್ನ ಫಿನ್ಲ್ಯಾಂಡ್ನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ನಾನು ನನ್ನ ಮಗನಿಗೆ ಈ ಸಂಶೋಧನೆಯನ್ನು ಮುಂದುವರಿಸು ಎಂದು ಹೇಳುತ್ತೇನೆ. ಇಡೀ ವಿಶ್ವಕ್ಕೆ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ಗೆ ಔಷಧಿ ಕಂಡು ಹಿಡಿದು ಅದನ್ನು ನಿರ್ಮೂಲನೆ ಮಾಡು ಎಂದು ನಾನು ನನ್ನ ಮಗನಿಗೆ ಹೇಳುತ್ತೇನೆ ಎಂದು ಮಹದೇಶ್ ಪ್ರಸಾದ್ ಅವರ ತಾಯಿ ಹೇಳಿದರು.