ಚಿಕ್ಕಮಗಳೂರು: 2018ರ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ನನ್ನ ಹೋರಾಟವನ್ನು ಮುಂದುವರೆಸುತ್ತೇನೆಂದು ದಲಿತರ ಪರ ಹೋರಾಟಗಾರ, ಗುಜರಾತ್ ಈ ಬಾರಿ ಆಯ್ಕೆಯಾದ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಕೋಮು ಸೌಹಾರ್ದ ವೇದಿಕೆಯ 15ನೇ ವರ್ಷದ ನೆನಪಿನ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ, ನನ್ನ ಹೋರಾಟ ದಲಿತ ಹಾಗೂ ಕೆಳಹಂತದ ಜನರ ಪರವಾಗಿರುತ್ತದೆ. ಕರ್ನಾಟಕದಲ್ಲಿ ನನಗೆ ಗೌರಿಲಂಕೇಶ್ ಸೇರಿದಂತೆ ಬಹಳಷ್ಟು ಹೋರಾಟಗಾರರ ಪರಿಚಯವಿತ್ತು, ನಮ್ಮ ಹೋರಾಟ ದಬ್ಬಾಳಿಕೆ ಹಾಗೂ ಕೋಮುವಾದ ಮಾಡುತ್ತಿರುವವರ ವಿರುದ್ಧವಾಗಿ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಕರ್ನಾಟಕ ಹಾಗೂ ಕೇರಳಲ್ಲಿರುವವರು ನನಗೆ ಹಲವು ಜವಾಬ್ದಾರಿಗಳನ್ನು ನೀಡಿದ್ದಾರೆ. ಇಂದು ನಾವು ಇಲ್ಲಿ ಕೋಮು ಸೌಹಾರ್ದ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಹಾಗೆಯೇ 2018ರ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲೂ ಚರ್ಚೆ ನಡೆಸಲಾಗಿದೆ. ಗುಜರಾತ್ ನಲ್ಲಿರುವ ನನ್ನ ಸ್ವಕ್ಷೇತ್ರದಲ್ಲೂ ಹಲವು ಹಿಂದುಳಿದ ಹಾಗೂ ಮುಸ್ಲಿಂ ಸಮುದಾಯಗಳು ನಮಗೆ ಬೆಂಬಲ ನೀಡಿದ್ದವು. ಅದೇ ರೀತಿ ಕರ್ನಾಟಕದಲ್ಲೂ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತೇನೆ. ಆದರೆ ಯಾವ ಪಕ್ಷ ಪರ ಸಹ ಚುನಾವಣಾ ಪ್ರಚಾರ ಕೈಗೊಳ್ಳುವುದಿಲ್ಲ. ಕೋಮುವಾದಿ ಶಕ್ತಿಗಳ ವಿರುದ್ಧ ಸ್ವತಂತ್ರವಾಗಿ ಸ್ಪರ್ಧೆ ನಡೆಸುವವರ ಪರ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಇದೇ ವೇಳೆ ಕೇಂದ್ರ ಸಚಿವ ಅನಂತಕುಮಾರ್ ಸಂವಿಧಾನ ವಿರೋಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಂಘ ಪರಿವಾರ ಹಾಗೂ ಬಿಜೆಪಿಯವರಿಗೆ ಮಧ್ಯವರ್ತಿ ರೀತಿಯಲ್ಲಿ ಕೋಮುವಾದ ಸೃಷ್ಟಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬಿಜೆಪಿಯವರೂ ಕೂಡಾ ಇದೇ ಕೆಲಸದಲ್ಲಿ ತೊಡಗಿದ್ದಾರೆ. ನಾವು ಕರ್ನಾಟಕದಲ್ಲಿ ಸಮಾನತೆ, ಸಹಬಾಳ್ವೆಗಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.