ಹಲವು ದಿನಗಳ ಹಿಂದೆ ದೊಡ್ಮನೆ ಸೊಸೆ ಗೀತಾ (Geeta) ಶಿವರಾಜ್ ಕುಮಾರ್ ಭವಿಷ್ಯ ನುಡಿದಿದ್ದರು. ಇದೀಗ ನಿಜವಾಗಿದೆ. ಸೊರಬ (Soraba) ಕ್ಷೇತ್ರದಿಂದ ಗೀತಾ ಸಹೋದರ ಮಧು ಬಂಗಾರಪ್ಪ (Madhu Bangarappa) ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು. ಗೆಲುವು ಘೋಷಣೆ ಆಗುತ್ತಿದ್ದಂತೆಯೇ ಗೀತಾ ಶಿವರಾಜ್ ಕುಮಾರ್ (Shivraj Kumar) ತಮ್ಮನ ಬಗ್ಗೆ ಭವಿಷ್ಯ ನುಡಿದಿದ್ದರು. ಈ ಬಾರಿ ಮಧು ಮಂತ್ರಿ ಆಗ್ತಾನೆ ಎಂದು ಮಾಧ್ಯಮಗಳ ಮುಂದೆ ಮಾತನಾಡಿದ್ದರು.
ನಿನ್ನೆಯಷ್ಟೇ ಕಾಂಗ್ರೆಸ್ (Congress) ಪಕ್ಷವು 24 ಜನ ಮಂತ್ರಿಗಳ ಪಟ್ಟಿ ಬಿಡುಗಡೆ ಆಗಿದ್ದು, ಆ ಪಟ್ಟಿಯಲ್ಲಿ ಮಧು ಬಂಗಾರಪ್ಪ ಹೆಸರಿದೆ. ಸಹಜವಾಗಿಯೇ ಗೀತಾ ಅವರ ಮಾತಿಗೆ ಬೆಲೆ ಬಂದಿದೆ. ಅಲ್ಲದೇ, ಮೊನ್ನೆಯಷ್ಟೇ ಕಾಂಗ್ರೆಸ್ ಮುಖಂಡ ಸುರ್ಜೆವಾಲಾ ಕೂಡ ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲೂ ಮಂತ್ರಿ ಮಾಡುವ ಕುರಿತು ಮಾತುಕತೆ ನಡೆದಿದೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಎಕ್ಸ್ ಕ್ಲೂಸಿವ್ ಸುದ್ದಿ ಪ್ರಕಟಿಸಿತ್ತು. ಇದನ್ನೂ ಓದಿ:ಈ ಕಾರಣಕ್ಕಾಗಿ ಯಶ್ ಸಿನಿಮಾ ಕೈ ಬಿಟ್ಟರು: ನಿರ್ದೇಶಕ ನರ್ತನ್
ಈವರೆಗೂ ಜೆಡಿಎಸ್ ಸಪೋರ್ಟ್ ಮಾಡುತ್ತಾ ಬಂದಿದ್ದ ಗೀತಾ ಶಿವರಾಜ್ ಕುಮಾರ್, ಇದೇ ಪಕ್ಷದಿಂದಲೇ ಚುನಾವಣೆಯನ್ನೂ ಎದುರಿಸಿದ್ದರು. ಈ ವರ್ಷ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಈ ಮೂಲಕ ಸಹೋದರ ಮಧು ಅವರ ಪರ ಪ್ರಚಾರಕ್ಕೆ ಶಿವರಾಜ್ ಕುಮಾರ್ ಅವರನ್ನು ಕರೆತಂದಿದ್ದರು. ಈ ಎಲ್ಲ ಸಹಕಾರವು ಮಧು ಅವರನ್ನು ಮಂತ್ರಿಯಾಗಿಸಿದೆ.
ಡಾ.ರಾಜ್ ಕುಟುಂಬದಲ್ಲಿ ಯಾರೂ ರಾಜಕಾರಣಕ್ಕೆ ಬಾರದೇ ಇದ್ದರೂ, ಪತ್ನಿ ಪರವಾಗಿ ಶಿವಣ್ಣ ರಾಜಕೀಯ ಆಖಾಡಕ್ಕೆ ಇಳಿದಿದ್ದರು. ಗೀತಾ ಅವರದ್ದು ರಾಜಕಾರಣ ಕುಟುಂಬವಾಗಿದ್ದರಿಂದ ಸಹಜವಾಗಿಯೇ ಶಿವರಾಜ್ ಕುಮಾರ್ ಪತ್ನಿಯ ಕೆಲಸಗಳಿಗೆ ಸಾಥ್ ನೀಡುವುದು ಅನಿವಾರ್ಯವಾಗಿತ್ತು. ಅದನ್ನು ಅವರು ನಿಭಾಯಿಸಿದ್ದರು.