– ಜಿಲ್ಲೆಯ ಹಲವೆಡೆ ಅಘೋಷಿತ ಬಂದ್
ಕೋಲಾರ: ಆಗಸದಲ್ಲಿ ಮುಂಜಾನೆಯಿಂದಲೂ ದಟ್ಟವಾದ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದರಿಂದ ಕೇತುಗ್ರಸ್ತ ಸೂರ್ಯಗ್ರಹಣವನ್ನು ಸರಿಯಾಗಿ ವೀಕ್ಷಣೆ ಮಾಡಲಾಗದೆ ಕೋಲಾರದ ಜನರಿಗೆ ಕೊಂಚ ನಿರಾಶೆ ಉಂಟಾಗಿದೆ.
ಬೆಳಗ್ಗೆ 9 ಗಂಟೆಯ ನಂತರ ಮೋಡ ಸ್ವಲ್ಪ ಕಡಿಮೆಯಾದ ಹಿನ್ನೆಲೆ ಆಗಾಗ ಸೂರ್ಯ ಆಗಸದಲ್ಲಿ ಕಾಣುತ್ತಿದ್ದನು. ಮೊದಲು ಅರ್ಧಚಂದ್ರಾಕೃತಿ ಕಂಡುಬಂದಿತು, ಅದಾದ ಮೇಲೆ ಆಗಾಗ ಮೋಡ ಪಕ್ಕಕ್ಕೆ ಸರಿದಂತೆ ಸೂರ್ಯನನ್ನು ಗ್ರಹಣ ಆವರಿಸುವ ದೃಶ್ಯಗಳು ಆಗಾಗ ಕಂಡು ಬಂದಿತು. 9:45ರ ವೇಳೆ ಸೂರ್ಯನನ್ನು ಪೂರ್ಣವಾಗಿ ಗ್ರಹಣ ಆವರಿಸಿ ಉಂಗುರಾಕೃತಿಯಲ್ಲಿ ಕಂಡುಬಂದ ದೃಶ್ಯಗಳು ಕಂಡುಬಂದಿತು. ಈ ವೇಳೆ ಬಹುತೇಕ ಕತ್ತಲು ಆವರಿಸಿದ ವಾತಾವರಣ ಕಂಡುಬಂದಿತು. ಇಂದು ಗ್ರಹಣದ ಹಿನ್ನೆಲೆ ಕೋಲಾರ ನಗರದಲ್ಲಿ ಜನರು ಯಾರೂ ರಸ್ತೆಗಿಳಿದಿರಲಿಲ್ಲ, ಪರಿಣಾಮ ಕೋಲಾರ ನಗರದ ರಸ್ತೆಗಳಲ್ಲಿ ಜನರಿಲ್ಲದೆ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು, ಅಲ್ಲಲ್ಲಿ ಹೋಟೆಲ್ ಹಾಗೂ ಒಂದೆರಡು ಅಂಗಡಿಗಳು ತೆರೆದಿದ್ದವು. ಅದನ್ನು ಹೊರತು ಪಡಿಸಿದರೆ ಬಸ್ ಸಂಚಾರ ಕೂಡಾ ವಿರಳವಾಗಿತ್ತು. ಗ್ರಹಣದ ಹಿನ್ನೆಲೆ ಕೋಲಾರದ ಬಹುತೇಕ ಮುಜರಾಯಿ ದೇವಾಲಯಗಳು ಬಂದ್ ಆಗಿದ್ದವು. ಕೋಲಾರ ನಗರದ ಡೂಂ ಲೈಟ್ ಸರ್ಕಲ್ನಲ್ಲಿರುವ ವಿದ್ಯಾಗಣಪತಿ ದೇವಾಲಯದಲ್ಲಿ ಗ್ರಹಣ ದೋಷವಿರುವ ನಕ್ಷತ್ರ ರಾಶಿಯವರಿಗೆ ಮಂತ್ರ ಪಠನೆ, ನವಹಗ್ರಹ ಪೂಜೆ ಹಾಗೂ ಶಾಂತಿ ಹೋಮ ಏರ್ಪಡಿಸಲಾಗಿತ್ತು. ಈ ಪೂಜಾ ಕಾರ್ಯಕ್ರಮದಲ್ಲಿ ಹತ್ತಾರು ಜನ ಭಾಗವಹಿಸಿ ಗ್ರಹಣ ಕಾಲದಲ್ಲಿ ದೇವರ ಪ್ರಾರ್ಥನೆ ಮಾಡಿದರು.
11:04ಕ್ಕೆ ಸೂರ್ಯ ಗ್ರಹಣ ಮೋಕ್ಷ ಸಿಗುತ್ತಿದ್ದಂತೆ ಎಲ್ಲಾ ದೇವಾಲಯಗಳನ್ನು ಗೋಮೂತ್ರ ಹಾಕಿ ಶುದ್ಧಿ ಮಾಡಿ, 1 ಗಂಟೆ ನಂತರ ಭಕ್ತರಿಗೆ ದರ್ಶನಕ್ಕೆ ಎಲ್ಲೆಡೆ ಅವಕಾಶ ಕಲ್ಪಿಸಿಲಾಯಿತು. ಒಟ್ಟಾರೆ ಇಂದು ಸೂರ್ಯಗ್ರಹಣದ ಕೌತುಕ ಹಾಗೂ ಆಚರಣೆಗೆ ಮೋಡಕವಿದದ್ದು ಮಾತ್ರ ಸುಳ್ಳಲ್ಲ.
ಗ್ರಹಣದ ಸಮಯದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ:
ಗ್ರಹಣದ ಮಧ್ಯಕಾಲದಲ್ಲಿ ಅಂದರೆ 9:50ರ ಸುಮಾರಿಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಮುಳಬಾಗಿಲು ತಾಲೂಕು ಪುಟ್ಟೇನಹಳ್ಳಿ ಗ್ರಾಮದ ಶ್ವೇತ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ.