ಮಂಡ್ಯ: ಸಕ್ಕರೆ ನಾಡಿನ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಶ್ ಅವರಿಗೆ ಮೊದಲ ಸವಾಲು ಎದುರಾಗಿದೆ. ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ರೈತರ ಬೆಳೆಗಳಿಗೆ ನೀರು ಬಿಡಿಸುವ ಜವಾಬ್ದಾರಿಯನ್ನು ಸುಮಲತಾರ ಹೆಗಲಿಗೆ ವರ್ಗಾಯಿಸಿದ್ದಾರೆ.
ಜಿಲ್ಲೆಯ ರೈತರ ಬೆಳೆಗಳು ಒಣಗುತ್ತಿದ್ದು, ಕೆಆರ್ ಎಸ್ನಿಂದ ನೀರು ಬಿಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರ ರವೀಂದ್ರ ಶ್ರೀಕಂಠಯ್ಯ, ಈ ಲೋಕಸಭಾ ಚುನಾವಣೆ ಅನುಕಂಪದ ಆಧಾರದಲ್ಲಿ ಫಲ ಪಡೆದಿದೆ. ಸುಮಲತಾ ಅವರು ಬರೀ ಪಕ್ಷೇತರ ಅಭ್ಯರ್ಥಿಯಾಗಿ ಉಳಿದಿಲ್ಲ. ಅವರು ಈಗ ನಮ್ಮ ಜಿಲ್ಲೆಯ ಸಂಸದೆಯಾಗಿರುವ ಸುಮಲತಾರನ್ನು ಅಭಿನಂದಿಸುತ್ತೇನೆ. ನಮ್ಮ ಜಿಲ್ಲೆಯ ನಾಲೆಗಳಿಗೆ ನೀರು ಹರಿಸುವ ವಿಷಯಲ್ಲಿ ನಮಗೆ ಸಪೋರ್ಟ್ ಸಿಕ್ಕಂತೆ ಆಗಿದೆ ಎಂದರು.
ನೀರು ನಿರ್ವಹಣಾ ಮಂಡಳಿ ಕೇಂದ್ರದ ಸುಪರ್ದಿಯಲ್ಲಿದ್ದು, ಸುಮಲತಾ ಅವರು ಸಂಸದರಾಗಿರುವದರಿಂದ ಜಿಲ್ಲೆಯ ಜನರಿಗೆ ಕೇಳಿದಾಗ ನೀರು ಬಿಡಿಸಿಕೊಡುತ್ತಾರೆ. ಇದರಿಂದ ಜಿಲ್ಲೆಯ ಜನರಿಗೆ ನ್ಯಾಯ ಸಿಗಲಿದೆ. ನಮ್ಮ ಜವಾಬ್ದಾರಿಗಳನ್ನು ಸುಮಲತಾರು ಸ್ವಲ್ಪ ತೆಗೆದುಕೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರೈತರ ಪರ, ಬಡವರ ಪರ ಇರಿ ಎಂದು ಸುಮಲತಾರನ್ನು ಕೇಳಿಕೊಳ್ಳುತ್ತೇನೆ ಎಂದು ಶಾಸಕರು ತಿಳಿಸಿದರು.