ಮಂಡ್ಯ: ರೈತರು ಹಾಗೂ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಕೆಆರ್ಎಸ್ನಲ್ಲಿ (KRS) ಸದ್ಯಕ್ಕೆ ನೀರಿನ ಕೊರತೆಯಿಲ್ಲ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ (Ramesha Bandisiddegowda) ಹೇಳಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ಜನರು ಹಾಗೂ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಆತಂಕ ಶುರುವಾಗಿದೆ. ಈ ಕುರಿತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಬಳಿ ಮಾತನಾಡಿದ ಅವರು, ಪ್ರಸ್ತುತ ಜಲಾಶಯದಲ್ಲಿ ಸುಮಾರು 82 ಅಡಿಗಳಷ್ಟು ನೀರಿದೆ. ಮುಂಗಾರು ಮಳೆ ಸ್ವಲ್ಪ ತಡವಾಗಿದ್ದರೂ, ಕನ್ನಂಬಾಡಿ ಕಟ್ಟೆಯ ಕೆಳಗಿರುವ ಯಾವುದೇ ಹಳ್ಳಿಗಳಿಗಾಗಲಿ ಅಥವಾ ಬೆಂಗಳೂರು ನಗರಕ್ಕಾಗಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಕೊನೆಯ ತನಕವೂ ಜನರಿಗೆ ಕುಡಿಯುವ ನೀರನ್ನು ತಲುಪಿಸುವ ಜವಾಬ್ದಾರಿ ನಮ್ಮದು ಎಂದು ಶಾಸಕರು ಭರವಸೆ ನೀಡಿದರು. ಇದನ್ನೂ ಓದಿ: ದೆಹಲಿ ಅಗ್ನಿ ದುರಂತ – ರಕ್ಷಣೆ ನಿರೀಕ್ಷೆಯಲ್ಲಿದ್ದ ದಂಪತಿ ಟಾಯ್ಲೆಟ್ನಲ್ಲೇ ಸಾವು

ಬೆಂಗಳೂರಿನ ನೀರಿನ (Bengaluru Water) ಅಗತ್ಯತೆಯ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿಗೆ ಹೋಗಬೇಕಾದ ನೀರು ಸಾಗುತ್ತಲೇ ಇದೆ. ಸದ್ಯ ಪ್ರತಿದಿನ 400 ರಿಂದ 500 ಕ್ಯೂಸೆಕ್ ನೀರನ್ನ ಒಳಗೆ ಬಿಡಲಾಗುತ್ತಿದೆ. ಅದು ಅಲ್ಲಿನ ಅಗತ್ಯಕ್ಕೆ ಸರಿಯಾಗುತ್ತಿದೆ. ಹೆಚ್ಚಿನ ನೀರಿನ ಅವಶ್ಯಕತೆಯಿದ್ದರೆ, ಅದನ್ನೂ ಒದಗಿಸಲು ನಾವು ಸಿದ್ಧರಿದ್ದೇವೆ. ಕಾವೇರಿ ತಾಯಿ ಇದುವರೆಗೆ ಯಾರಿಗೂ ಮೋಸ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವನ್ನ ನಾವಿಂದು ಕಾಣ್ತಿದ್ದೇವೆ ಎಂದು ಮೈಸೂರು ಮಹಾರಾಜರನ್ನ ಸ್ಮರಿಸಿದರು. ವಿಷ್ಯದ ಭದ್ರತೆಗೆ ಸರ್ಕಾರದ ದೂರದೃಷ್ಟಿ ಅಗತ್ಯ. ಮುಂದಿನ ದಿನಗಳಲ್ಲಿ ನೀರಿನ ವ್ಯರ್ಥವನ್ನ ತಡೆಯಲು ಸರ್ಕಾರ ಹೊಸ ಯೋಜನೆಗಳನ್ನ ರೂಪಿಸಬೇಕು ಎಂದು ಶಾಸಕರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್

ಮಳೆ ಬಂದಾಗ ಸಿಗುವ ಹೆಚ್ಚುವರಿ ನೀರನ್ನ ಕನ್ನಂಬಾಡಿಯಲ್ಲೇ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಜಲಾಶಯಕ್ಕೆ ಪ್ಯಾರಲಲ್ ಆಗಿ ಪ್ರಮುಖ ಕೆರೆ-ಕಟ್ಟೆಗಳನ್ನು ಪುನಶ್ಚೇತನಗೊಳಿಸಿ, ಆ ಸಮಯದಲ್ಲಿ ನೀರು ತುಂಬಿಸುವ ಕೆಲಸವನ್ನ ಸರ್ಕಾರ ಮಾಡಬೇಕಿದೆ. ಈ ದೂರದೃಷ್ಟಿ ಯೋಜನೆ ಜಾರಿಯಾದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯೇ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.













