ಬಳ್ಳಾರಿ: ಸದಾ ವಿವಾದಗಳಿಂದಲೇ ಹೆಸರುವಾಸಿ ಆಗಿರುವ ಜಿಲ್ಲೆಯ ವಿಮ್ಸ್ ಆಸ್ಪತ್ರೆಗೆ ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಇಂದು ದಿಢೀರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆ ವ್ಯವಸ್ಥೆ ನೋಡಿ ಕೆಂಡಾಮಂಡಲರಾಗಿದ್ದಾರೆ.
ಶುಕ್ರವಾರವಷ್ಟೆ ಆಡಳಿತ ಮಂಡಳಿಯ ಜೊತೆ ಸಭೆ ನಡೆಸಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದ ಸಚಿವರು ಇಂದು ವಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ವಿರುದ್ಧ ಗರಂ ಆಗಿದ್ದಾರೆ. ರೋಗಿಗಳನ್ನು ಭೇಟಿ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಸಚಿವರು ಮಾಹಿತಿ ಪಡೆದಿದ್ದಾರೆ. ಅಲ್ಲದೇ ವೆಂಟಿಲೇಟರ್, ಡಯಾಲಿಸಿಸ್ ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಆಸ್ಪತ್ರೆ ಅವ್ಯವಸ್ಥೆಯನ್ನು ಕಣ್ಣಾರೆ ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ತುಕಾರಾಂ, ಆಸ್ಪತ್ರೆಯಲ್ಲಿರುವ ವೆಂಟಿಲೇಟರ್ ಹಾಗೂ 14 ಡಯಾಲಿಸಿಸ್ಗಳಲ್ಲಿ 7 ಕೆಟ್ಟು ಹೋಗಿದೆ. ಇವೆಲ್ಲವನ್ನೂ ರೆಡಿ ಮಾಡುವುದರ ಜೊತೆಗೆ 4 ಹೊಸ ವೆಂಟಿಲೇಟರ್ ಖರೀದಿ ಮಾಡಲು ಆಸ್ಪತ್ರೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕುಡಿಯುವ ನೀರಿಗಾಗಿ ಅಲ್ಲಿಪುರ ಕೆರೆಯಿಂದ ನೇರವಾಗಿ ವಿಮ್ಸ್ಗೆ ಸಂಪರ್ಕ ಕಲ್ಪಿಸಲಾಗುವುದು. ವಿಮ್ಸ್ ಆಸ್ಪತ್ರೆಗೆ ಬೇಕಾಗುವ ವಿವಿಧ ಯಂತ್ರಗಳನ್ನು ಖರೀದಿ ಮಾಡಲು 4.50 ಕೋಟಿ, ಔಷಧಿಗಾಗಿ 3 ಕೋಟಿ ಮೀಸಲಿಡಲು ಸೂಚಿಸಿದ್ದೇನೆ. ಹೊರಗಡೆ ಔಷಧಿ ಚೀಟಿ ಬರೆದುಕೊಡದಂತೆ ಆದೇಶ ಮಾಡಿದ್ದೇನೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv