– ನಿರಂತರ ಸಾವಿಗೆ ಸಾಕ್ಷಿಯಾದ ಗೋಕರ್ಣ ಕಡಲತೀರ
ಕಾರವಾರ: ಸಮುದ್ರದಲ್ಲಿ ಈಜಲು ಹೋದ ಯುವಕ ಅಲೆಗಳ ಅಬ್ಬರಕ್ಕೆ ಮುಳಗಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಇಂದು ಸಂಜೆ ನಡೆದಿದೆ.
ಬೀದರ್ ಜಿಲ್ಲೆಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ವಿಕ್ರಮ್ ಸಾವು ಕಂಡದ್ದಾನೆ. ಆರು ಜನ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದಿದ್ದರು. ಈ ವೇಳೆ ಕುಡ್ಲೆ ಕಡಲತೀರದಲ್ಲಿ ಈಜುವಾಗ ಅಲೆಗೆ ಸಿಕ್ಕು ವಿಕ್ರಮ್ ಸಾವು ಕಂಡಿದ್ದಾನೆ. ಇದನ್ನೂ ಓದಿ: ಮೂಳೆ ಮುರಿತ – ಆಟ ನಿಲ್ಲಿಸಿದ ವಿಶ್ವದ ವೇಗದ ರೋಲರ್ ಕೋಸ್ಟರ್
ಈತನ ಶವವನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.
ಗೋಕರ್ಣ ಕಡಲತೀರ ಅಪಾಯ!
ಇದೇ ತಿಂಗಳಲ್ಲಿ ಪ್ರವಾಸಕ್ಕೆಂದು ಬಂದ 10 ಜನ ಕಡಲಿನ ಅಲೆಗಳಿಗೆ ಕೊಚ್ಚಿ ಹೋಗಿ ಸಾವು ಕಂಡಿದ್ದಾರೆ. ಗೋಕರ್ಣದ ಕಡಲ ತೀರದಲ್ಲಿ ಲೈಫ್ ಗಾರ್ಡ್, ಪ್ರವಾಸಿ ಮಿತ್ರ ಹಾಗೂ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿದೆ. ಪ್ರವಾಸಿಗರಿಗೆ ಎಚ್ಚರಿಕೆ ನೀಡಿದರೂ ಸಮುದ್ರದಲ್ಲಿ ಈಜಾಡಲು ಹೋಗಿ ತಮ್ಮ ಜೀವವನ್ನೇ ಕಳೆದುಕೊಳ್ಳುತಿದ್ದಾರೆ.
ಲೈಫ್ ಗಾರ್ಡ್ ಗಳು ತಮ್ಮ ಜೀವ ಒತ್ತೆ ಇಟ್ಟು ಸಾಕಷ್ಟು ಪ್ರವಾಸಿಗರನ್ನು ಬದುಕಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆಗೆ ಸಹ ಈಗಾಗಲೇ ಕಡಲ ತೀರ ಭಾಗದಲ್ಲಿ ಗೋವಾ ಮಾದರಿಯಲ್ಲಿ ಪೆಟ್ರೋಲಿಂಗ್ ಮಾಡಲು ಬೋಟ್ ಗಳನ್ನು ನೀಡುವಂತೆ ಕೇಳಿಕೊಂಡು ವರ್ಷಗಳೇ ಗತಿಸಿವೆ. ಗೋಕರ್ಣದ ಓಂ ಬೀಚ್ ನಲ್ಲಿ ಸಮುದ್ರ ಶಾಂತವಾಗಿರುವಂತೆ ಕಂಡರೂ ಬಲಭಾಗದ ಸಮುದ್ರ ಭಾಗದಲ್ಲಿ ಸುಳಿಗಳಿವೆ.
ಸೆಲ್ಫಿ ಕ್ರೇಜ್ ನಲ್ಲಿ ಜನ ಇಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಜವರಾಯನಿಗೆ ಆಹಾರವಾಗುತ್ತಿದ್ದಾರೆ. ಗೋಕರ್ಣದ ಮುಖ್ಯ ಕೆಲತೀರ, ಕುಡ್ಲೆ ಕಡಲತೀರಗಳಲ್ಲಿ ರಭಸದ ಅಲೆಗೆ ಸಿಲುಕಿ ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತಿದ್ದಾರೆ. ಹೆಚ್ಚು ಜನರು ಆಗಮಿಸುವ ಹಿನ್ನೆಲೆ ಪ್ರವಾಸಿಗರ ಪ್ರಾಣ ರಕ್ಷಣೆಗೆ ವಿಶೇಷ ಗಮನ ಹಾಗೂ ಲೈಫ್ ಗಾರ್ಡ್ ಗಳಿಗೆ ಹೆಚ್ಚಿನ ಸೌಲಭ್ಯವನ್ನು ಜಿಲ್ಲಾಡಳಿತ ನೀಡಬೇಕಿದೆ. ಇಲ್ಲವಾದರೆ ತಿಂಗಳಲ್ಲಿ ಅದೆಷ್ಟು ಜೀವಗಳು ಬಲಿಯಾಗಲಿದೆಯೋ ಊಹಿಸಲು ಸಾಧ್ಯವಾಗದು.