ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ.
ಶುಕ್ರವಾರ ಚಪ್ಪರ ಪೂಜೆ ನೆರವೇರಿದ್ದು, ಇಡೀ ಬೀದಿಗೆ ಚಪ್ಪರ ಹಾಕಲಾಗಿದೆ. ಮನೆಯಂಗಳದಲ್ಲಿ ಚಪ್ಪರ ಹಾಗೂ ಬಾಳೆ ಕಂಬ ಮಿನುಗುತ್ತಿದೆ. ಇಂದು ಶಾಸ್ತ್ರೋಕ್ತವಾಗಿ ಅರಿಶಿನ ಶಾಸ್ತ್ರ ನಡೆಯಲಿದೆ. ಧ್ರುವ ಮದುವೆ ಸಂಭ್ರಮದಲ್ಲಿ ನಟಿ ತಾರಾ ಅನುರಾಧಾ ಅವರು ಪಾಲ್ಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಧ್ರುವ ಮನೆಯಲ್ಲಿ ಯಾವುದೇ ಕಾರ್ಯ ಮಾಡಿದರು ಬಹಳ ಶಾಸ್ತ್ರೋಕ್ತವಾಗಿ ಮಾಡುತ್ತಾರೆ. ಈಗಾಗಲೇ ಮಂಟಪ ನೋಡಿರಬಹುದು ಅಡಿಕೆ ಮರ ಹಾಗೂ ತೆಂಗಿನ ಗರಿಯಿಂದ ಮಾಡಿದ್ದಾರೆ. ಧ್ರುವ ನಮ್ಮನೆ ಹುಡುಗ. ಅರಿಶಿನ ಶಾಸ್ತ್ರಕ್ಕೆ ಬರಲೇ ಬೇಕು ಎಂದು ಧ್ರುವ ಹೇಳಿದ್ದನು. ಹಾಗಾಗಿ ನಾನು ಬಂದೆ. ಇಂದು ಮನೆಯಲ್ಲಿ ಅರಿಶಿನ ಶಾಸ್ತ್ರ ನಡೆಯಲಿದೆ. ಬಳಿಕ ಸಂಜೆ ಕಲ್ಯಾಣ ಮಂಟಪದಲ್ಲಿ ಲಗ್ನ ಕಟ್ಟಿಸುವ ಶಾಸ್ತ್ರ ನಡೆಯಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಧ್ರುವಗೆ ಶಾಸ್ತ್ರೋಕ್ತ ಸಂಪ್ರದಾಯ ಎಂದರೆ ಬಹಳ ಇಷ್ಟ. ಅವನ ಆರಾಧ್ಯ ದೈವ ಆಂಜನೇಯ. ಅವನು ತನ್ನ ಕೈಯಲ್ಲೇ ಆಂಜನೇಯ ಬರೆಸಿಕೊಂಡಿದ್ದಾನೆ. ಆಂಜನೇಯನನ್ನು ಪ್ರಾರ್ಥನೆ ಮಾಡಿಕೊಂಡು ಅವನ ಮಾವ ಅರ್ಜುನ್ ಸರ್ಜಾ ಹಾಗೂ ಕುಟುಂಬಸ್ಥರು ಈಗಾಗಲೇ ಮನೆಯಲ್ಲಿ ನೆಲೆಸಿದ್ದಾರೆ. ಇಲ್ಲಿ ಎಲ್ಲ ಶಾಸ್ತ್ರಗಳನ್ನು ಮುಗಿಸಿಕೊಂಡು ಸಂಜೆ ಕಲ್ಯಾಣ ಮಂಟಪಕ್ಕೆ ಹೋಗುತ್ತಾರೆ. ನಂತರ ಎಲ್ಲ ಶಾಸ್ತ್ರಗಳನ್ನು ಮಾಡುತ್ತಾರೆ. 5 ದಿನದ ಹಿಂದೆನೇ ಎಲ್ಲ ಶಾಸ್ತ್ರ ನಡೆಯುತ್ತಿದೆ. ನಾನು 5 ದಿನ ಇರುವುದು ನನಗೆ ಖುಷಿಯಾಗಿದೆ ಎಂದು ಹೇಳಿದರು.
ಧ್ರುವ ತಮ್ಮ ಬಹುಕಾಲದ ಗೆಳತಿ ಪ್ರೇರಣ ಶಂಕರ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಭಾನುವಾರ ಬೆಳ್ಳೆಗ್ಗೆ 7.15ರಿಂದ 7.45ಕ್ಕೆ ವಿವಾಹ ಮುಹೂರ್ತ ನಿಗಧಿಯಾಗಿದ್ದು, ಸಂಜೆ 7 ಗಂಟೆ ನಂತ್ರ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ.