ಮಂಗಳೂರು: ಗೋಲಿಬಾರ್ ಗೆ ನೇರ ಕಾರಣ ಕರ್ನಾಟಕ ರಾಜ್ಯ ಸರ್ಕಾರವಾಗಿದ್ದರೂ ಘೋಷಿಸಿದ ಪರಿಹಾರವನ್ನು ವಾಪಸ್ ಪಡೆದಿರೋದು ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬಂದಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕೇವಲ 300 ಮಂದಿ ಪ್ರತಿಭಟನಾಕಾರರನ್ನು ಕಂಟ್ರೋಲ್ ಮಾಡಲು ಆಗದಿದ್ದ ಪೊಲೀಸರು ಯಾಕೆ ಬೇಕು? ಪೊಲೀಸರು ಈ ರೀತಿಯಾಗಿ ಗೋಲಿಬಾರ್ ಮಾಡಬಾರದಿತ್ತು ಎಂದು ಹೇಳಿದ್ದಾರೆ.
ನಾನು ಜಿಲ್ಲಾಧಿಕಾರಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಈ ರೀತಿ ಗೋಲಿಬಾರ್ ಆಗಿ ಎರಡು ಜೀವಗಳು ಬಲಿಯಾಗಿರೋದು ತುಂಬಾ ಬೇಸರ ತಂದಿದೆ. ಪೊಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡೋದು ಹಿಂದಿನಿಂದಲೂ ಇದೆ. ಆದರೆ ಇದೇ ಮೊದಲ ಬಾರಿಗೆ ಘೋಷಿಸಿದ ಪರಿಹಾರ ಮೊತ್ತವನ್ನು ವಾಪಸ್ ಪಡೆಯಲಾಗಿದೆ. ರಾಜ್ಯದಲ್ಲಿ ಮೊದಲು ಮಾನವೀಯತೆ ನೋಡಬೇಕು. ಅದರ ಬದಲು ಈ ತರದ ನಿರ್ಧಾರ ಮಾಡೋದು ಸರ್ಕಾರದ ಸರಿಯಾದ ಕ್ರಮವಲ್ಲ ಎಂದರು.
ಸಿಎಎ ಹಾಗೂ ಎನ್.ಆರ್.ಸಿ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಈ ಮಸೂದೆಯಿಂದ ದೇಶ ವಿಭಜನೆಯಾಗುತ್ತದೆ. ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ತುಂಬಾ ತೊಂದರೆಯಾಗುತ್ತದೆ. ದೇಶಕ್ಕೆ ಈಗ ಈ ಮಸೂದೆಯ ಅವಶ್ಯಕತೆ ಇಲ್ಲ. ಮುಂದೆ ಬೇಕಾದರೆ ಯೋಚಿಸಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.