ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಮುಗಿಸಲು ಬಿಜೆಪಿ ಐಟಿ ಸಹಾಯ ಪಡೆದುಕೊಂಡು ಮಂಡ್ಯದಲ್ಲಿ ದಾಳಿ ನಡೆಸುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ ಬೆನ್ನಲ್ಲೇ ಐಟಿ ಈಗ ಮಂಡ್ಯದಲ್ಲಿ ವಿಶೇಷ ಕಂಟ್ರೋಲ್ ರೂಮ್ ತೆರೆದಿದೆ.
ಮಂಡ್ಯದಲ್ಲಿ ಸದ್ದಿಲ್ಲದೆ ಐಟಿಯ ಕಂಟ್ರೋಲ್ ರೂಂ ತೆರೆದಿದ್ದು, ಮಂಡ್ಯದ ಮೂಲೆ ಮೂಲೆಯಲ್ಲೂ ಐಟಿ ಸಂಚಾರಿ ತನಿಖಾ ದಳ ಸ್ಥಾಪನೆ ಮಾಡಲಾಗಿದೆ. ಮಂಡ್ಯ ಕ್ಷೇತ್ರದ 40 ಕಡೆಗಳಲ್ಲಿ ಐಟಿಯಿಂದ ರಹಸ್ಯ ಕಾರ್ಯಾಚರಣೆ ನಡೆಯಲಿದ್ದು, ಬಾಲಕೃಷ್ಣನ್ ಸೂಚನೆ ಮೇರೆಗೆ ಮಂಡ್ಯದಲ್ಲಿ `ಅಪರೇಷನ್ ಮನಿ’ಗೆ ಇಬ್ಬರು ಅಧಿಕಾರಿಗಳು ಕೂಡ ಬಂದಿಳಿದಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ನಮ್ಮ ಕಾರ್ಯಕರ್ತರು, ಮುಖಂಡರು ಸಿಂಹದ ಮರಿಗಳು: ಪುಟ್ಟರಾಜು
ಮಂಡ್ಯದಲ್ಲಿ ಸ್ಥಾಪಿಸಲಾಗಿರುವ ಐಟಿ ಕಂಟ್ರೋಲ್ ರೂಂನಲ್ಲೇ ಫೋನ್ ಕದ್ದಾಲಿಕೆ ವ್ಯವಸ್ಥೆ ಕೂಡ ಮಾಡಲಾಗಿದೆ. `ಟಾರ್ಗೆಟ್ ಮಾಡಲಾದ ವ್ಯಕ್ತಿಗಳ ಫೋನ್ ಕದ್ದಾಲಿಕೆ’ಗೆ ಇಲ್ಲೇ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ `ಟಾರ್ಗೆಟ್ ಆಗಿರುವ ವ್ಯಕ್ತಿ’ಗಳ ಮೊಬೈಲ್ ನಂಬರ್, ಧ್ವನಿಯನ್ನ ಫೀಡ್ ಮಾಡ್ತಾರೆ. ಈ ಮೂಲಕ 1 ಕಿಲೋ ಮೀಟರ್ ದೂರದಿಂದಲೇ ಟಾರ್ಗೆಟ್ ವ್ಯಕ್ತಿಗಳ ಕಾಲ್ ಕದ್ದಾಲಿಕೆ ಆಗುತ್ತದೆ. ಹಣ ಸಾಗಾಟ, ಸುಮಲತಾ ವಿರೋಧಿಗಳ ಕ್ಷಣಕ್ಷಣದ ನಡೆಯ ಬಗ್ಗೆಯೂ ಮಾಹಿತಿ ಸಂಗ್ರಹವಾಗುತ್ತದೆ. ಈ ಎಲ್ಲ ಆಪರೇಷನ್ಗಳನ್ನು ನೋಡಿಕೊಳ್ಳಲು ಇಬ್ಬರು ಅಧಿಕಾರಿಗಳ ರವಾನೆ ಮಾಡಲಾಗಿದೆ. ಈಗಾಗ್ಲೇ ಮಂಡ್ಯಕ್ಕೆ ಪಂಕಜ್ಕುಮಾರ್ ಸಿಂಗ್, ಹೇಮಂತ್ ಹಿಂಗೋನಿಯಾ ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.