ಚಿಕ್ಕಬಳ್ಳಾಪುರ: ಪತ್ನಿಯ ಜೊತೆ ಜಗಳವಾಡಿದ್ದ ಪತಿಯೊಬ್ಬ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಪೊಲೀಸ್ ಠಾಣೆಗೆ ಓಡಿ ಬಂದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಗ್ರಾಮದಲ್ಲಿ ನಡೆದಿದೆ.
ನಗರ್ಲು ಗ್ರಾಮದ ರಘು ಎಂಬಾತ ಮದ್ಯದ ದಾಸನಾಗಿದ್ದು, ಬುಧವಾರ ರಾತ್ರಿ ಪತ್ನಿ ಸುಜಾತ ತಾಯಿ ವೆಂಕಟಮ್ಮಳ ಮೇಲೆ ಹಲ್ಲೆ ಮಾಡಿ ಜಗಳ ಮಾಡಿದ್ದಾನೆ. ಇಂದು ಬೆಳಗ್ಗೆ ಪಾತಪಾಳ್ಯ ಪೊಲೀಸ್ ಠಾಣೆ ಬಳಿ ಇರುವ ತೋಪಿನಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ಬೆಂಕಿ ಹಚ್ಚಿಕೊಂಡ ರಘು ಪಾತಪಾಳ್ಯ ಪೊಲೀಸ್ ಠಾಣೆಗೆ ಓಡಿ ಬಂದು ಠಾಣೆಯ ಎದುರು ಕಾಪಾಡಿ ಕಾಪಾಡಿ ಎಂದು ಹೇಳಿ ಕುಸಿದುಬಿದ್ದಿದ್ದಾನೆ. ಕೂಡಲೇ ರಕ್ಷಣೆಗೆ ಧಾವಿಸಿದ ಪೊಲೀಸರು ಬೆಂಕಿ ನಂದಿಸಿ, ಗಾಯಾಳು ರಘುನನ್ನು ಅಂಬುಲೆನ್ಸ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.