ಬೆಂಗಳೂರು: ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೊಲೆರೋ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಟೆಲಿಕಾಂ ಅಂಗಡಿಗೆ ನುಗ್ಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸುಧಾನಗರದ ಸತ್ಯಂ ಹೋಟೆಲ್ ಬಳಿ ನಡೆದಿದೆ. ಜೀಪ್ ಚಾಲಕ ಪಾನಮತ್ತನಾಗಿ ಹಾಗೂ ಗಾಂಜಾ ನಶೆಯಲ್ಲಿದ್ದ ಎನ್ನಲಾಗಿದೆ.
ಎಸ್.ಎಸ್ ಶೀಟ್ಗಳನ್ನು ತುಂಬಿಕೊಂಡು ಬಂದಿದ್ದ ಜೀಪ್, ರಸ್ತೆಯಿಂದ ಏಕಾಏಕಿ ಅಂಗಡಿಗೆ ನುಗ್ಗಿದೆ. ಪರಿಣಾಮ ಒಂದು ಬೈಕ್, ಸೈಕಲ್, ಕಾರು ಹಾಗೂ ಅಂಗಡಿ ಜಖಂ ಆಗಿದೆ. ಈ ಜೀಪ್ ಸುಮಾರು ಹೆದ್ದಾರಿ ರಸ್ತೆಯಿಂದ 150 ಮೀಟರ್ ಅಂಗಡಿಯ ಒಳಗೆ ನುಗ್ಗಿದೆ ಎನ್ನಲಾಗಿದೆ.
ಅದೃಷ್ಟವಶಾತ್ ಅಲ್ಲಿಯೇ ಇದ್ದ ವೇಣುಗೋಪಾಲ್ ಎಂಬ ಬಾಲಕನಿಗೆ ಸಣ್ಣಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.