ಬೆಂಗಳೂರು: ಬುಧವಾರ(ನಾಳೆ) ಮಕರ ಸಂಕ್ರಾಂತಿ ಹಬ್ಬವಾಗಿದ್ದು, ಹಬ್ಬದ ತಯಾರಿಯಲ್ಲಿ ಸಿಲಿಕಾನ್ ಸಿಟಿ ಜನ ಬ್ಯುಸಿಯಾಗಿದ್ದಾರೆ. ಹಬ್ಬ ಅಂದ್ಮೇಲೆ ಸಂಭ್ರಮ ಸಡಗರಕ್ಕೇನು ಕಡಿಮೆ ಇರುವುದಿಲ್ಲ.
ಸುಗ್ಗಿ ಹಬ್ಬವೆಂದೇ ಪ್ರಸಿದ್ಧಿಯಾಗಿಯೋ ಸಂಕ್ರಾಂತಿ ಹಬ್ಬವನ್ನು ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರಲ್ಲೂ ರೈತಾಪಿ ವರ್ಗದವರು ತಾವು ಬೆಳೆದ ಬೆಳೆಗಳನ್ನು ಪೂಜಿಸಿ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಹಳ್ಳಿ ಸೊಗಡಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ವಿಶೇಷವಾದ ಸ್ಥಾನವಿದೆ. ತಮ್ಮ ದನಕರುಗಳಿಗೆ ಸ್ನಾನ ಮಾಡಿಸಿ ಅಲಂಕಾರ ಮಾಡುವ ಮೂಲಕ ಪ್ರಾಣಿಗಳ ಜೊತೆಗೂ ಹಬ್ಬದ ಆಚರಣೆ ನಡೆಯುತ್ತದೆ. ನಾಳೆ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಲಾಲ್ ಬಾಗ್ ನ ನೌಕರರು ಇಂದೇ ಹಬ್ಬವನ್ನು ಆಚರಿಸಿದ್ದಾರೆ.
ಲಾಲ್ ಬಾಗ್ ನಲ್ಲಿ ಹಬ್ಬಕ್ಕಾಗಿ ವಿಶೇಷವಾಗಿ ಅಲಂಕಾರ ಮಾಡಿ ಸಂಕ್ರಾಂತಿ ಸ್ಪೆಷಲ್ ಆದ ಕಬ್ಬು, ಅವರೇಕಾಯಿ, ಗೆಣಸು, ಕಡಲೇಕಾಯಿ ಹಾಗೂ ರಾಗಿಯನ್ನ ಒಂದು ಕಡೆ ಇಟ್ಟು ರೈತರು ಹೇಗೆ ಹಳ್ಳಿಗಳಲ್ಲಿ ತಮ್ಮ ಧವಸ ಧಾನ್ಯಗಳನ್ನು ಪೂಜಿಸಿತ್ತಾರೋ ಹಾಗೆಯೇ ಪೂಜೆ ಮಾಡಿ ಸಂಕ್ರಾಂತಿ ಹಬ್ಬವನ್ನ ಆಚರಿಸಿದ್ದಾರೆ.