ಧಾರವಾಡ: ಸಾಹಿತಿ ಮತ್ತು ವಿಚಾರವಾದಿ ಎಂ.ಎಂ ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಯನ್ನು ಕಲಬುರ್ಗಿ ಅವರ ಧರ್ಮಪತ್ನಿ ಉಮಾದೇವಿ ಗುರುತಿಸಿದ್ದಾರೆ.
ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಗುಂಡು ಹಾರಿಸಿದ ವ್ಯಕ್ತಿ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಎಂದು ಸಾಬೀತು ಆಗಿದೆ. ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ನಡೆದ ಗುರುತು ಪತ್ತೆ ಕಾರ್ಯದಲ್ಲಿ ಉಮಾದೇವಿ ಅವರು ಆರೋಪಿ ಗಣೇಶ್ ಮಿಸ್ಕಿನ್ನನ್ನು ಗುರುತಿಸಿದ್ದಾರೆ.
ಧಾರವಾಡ ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಗುರುತುಪತ್ತೆ ಕಾರ್ಯದಲ್ಲಿ, ಎಸ್ಐಟಿ ಅಧಿಕಾರಿಗಳು ಗಣೇಶ್ ಮಿಸ್ಕಿನ್ ಸೇರಿದಂತೆ ಹತ್ತು ಜನರನ್ನು ನಿಲ್ಲಿಸಿ ಗುರುತು ಪತ್ತೆ ಕಾರ್ಯ ನಡೆಸಿದ್ದಾರೆ. ಮೂರು ಸುತ್ತಿನಲ್ಲಿ ನಡೆದ ಈ ಗುರುತು ಪತ್ತೆಯಲ್ಲಿ ಮೂರು ಬಾರಿಯೂ ಮಿಸ್ಕಿನ್ನನ್ನೇ ಉಮಾದೇವಿ ಅವರು ಗುರುತಿಸಿದ್ದಾರೆ.
2015ರ ಅಗಸ್ಟ್ 30ರಂದು ಎಂ.ಎಂ ಕಲಬುರ್ಗಿ ನಿವಾಸಕ್ಕೆ ಬೈಕ್ನಲ್ಲಿ ಬಂದ ಆರೋಪಿಗಳು ಗುಂಡಿಕ್ಕಿ ಕಲಬುರ್ಗಿಯವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. 4 ವರ್ಷಗಳ ಸುದೀರ್ಘ ತನಿಖೆ ಬಳಿಕ ಇದೀಗ ಪ್ರಕರಣ ಕೊನೆ ಹಂತ ತಲುಪಿದೆ.