ಮಂಡ್ಯ: ಲೋಕಸಭಾ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ಎಲ್ಆರ್ ಶಿವರಾಮೇಗೌಡಗೆ ಮುಳುವಾಗುತ್ತಾ 25 ವರ್ಷ ಹಿಂದಿನ ಕೇಸ್ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗುರಿಯಾಗಿದೆ.
25 ವರ್ಷಗಳ ಹಿಂದೆ ಕಂಚನಹಳ್ಳಿ ವಕೀಲ ಗಂಗಾಧರ ಮೂರ್ತಿ, ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿರುತ್ತಾರೆ. ಆ ವೇಳೆ ಅವರು ಶಿವರಾಮೇಗೌಡರು ನಡೆಸುತ್ತಿದ್ದ ಎಂದು ಹೇಳಲಾಗುವ ಅಕ್ರಮಗಳ ಬಗೆಗೆ ಸತತವಾಗಿ ಬರೆಯಲಾರಂಭಿಸಿದ್ದರು. ಒಂದು ದಿನ ಅವರ ಕೊಲೆ ನಡೆದು ಹೋಯ್ತು. ಈ ಕೊಲೆ ಹಿಂದೆ ಶಿವರಾಮೇಗೌಡ ಅವರ ಕೈವಾಡ ಇದೆ ಎಂದು ಆರೋಪಿಸಿ ಸುದ್ದಿ ಹರಡಿತ್ತು. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ನಾಗಮಂಗಲದಲ್ಲಿ ಪ್ರಗತಿಪರರಿಂದ ದೊಡ್ಡ ಪ್ರತಿಭಟನೆ ನಡೆದಿತ್ತು.
ಅಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪತ್ರಕರ್ತನ ಫೋಟೋ ಹಿಡಿದು ಪ್ರತಿಭಟನೆ ಮಾಡಿದ್ದರು. ನಂತರ ಸಭೆಯಲ್ಲೂ ಪಾಲ್ಗೊಂಡು ಶಿವರಾಮೇಗೌಡರ ವಿರುದ್ಧ ಗುಡುಗಿದ್ದರು. ಆದರೆ ಇಂದು ಅವರಿಗೇ ಟಿಕೆಟ್ ನೀಡಲಾಗಿದೆ. ಅಂದು ಶಿವರಾಮೇಗೌಡರನ್ನ ಅವನೊಬ್ಬ ಕೇಡಿ, ಅವನಿಗೆ ಬೇಡಿ ಹಾಕಿ ಎಂದಿದ್ದ ಗೌಡರು ಇಂದು ಟಿಕೆಟ್ ನೀಡಿದ್ದಾರೆ.
ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ ಮಿತ್ರರೂ ಅಲ್ಲ ಎಂದು ಬರೆದು ಟ್ರೋಲ್ ಮಾಡಿ ಚರ್ಚೆ ಮಾಡಲಾಗ್ತಿದೆ. ಅಂದು ದೇವೇಗೌಡರ ಜೊತೆ ಸಿದ್ದರಾಮಯ್ಯ ಅವರೂ ಇದ್ದರು ಅನ್ನೋದು ವಿಶೇಷ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv