ಮಂಡ್ಯ: ಲೋಕಾಯುಕ್ತ ಬಲೆಗೆ ಬಿದ್ದಿದ್ದ ಅಧಿಕಾರಿಯೊಬ್ಬನಿಗೆ ಜೈಲಿನ ಬದಲು ಆಸ್ಪತ್ರೆಯಲ್ಲಿ ರಾಜಾತಿಥ್ಯ ಕಲ್ಪಿಸುತ್ತಿದ್ದ ಆಘಾತಕಾರಿ ಘಟನೆ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಯಲ್ಲಿ ಬಯಲಾಗಿದೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ. ಚಂದ್ರಶೇಖರ್ ನೇತೃತ್ವದ ತಂಡ ನಡೆಸಿದ ದಿಢೀರ್ ದಾಳಿಯಲ್ಲಿ ಜೈಲಾಧಿಕಾರಿಗಳು ಹಾಗೂ ವೈದ್ಯರ ಶಾಮೀಲಾತಿ ಸಾಕ್ಷಿ ಸಮೇತ ಸಿಕ್ಕಿಬಿದ್ದಿದೆ.
ಅಕ್ರಮ ಖಾತೆ ಸೃಷ್ಟಿ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಶ್ರೀರಂಗಪಟ್ಟಣದ ಎಡಿಎಲ್ಆರ್ (ADLR) ಮಹಮದ್ ಹುಸೇನ್, ನ್ಯಾಯಾಂಗ ಬಂಧನದಲ್ಲಿ ಜೈಲಿನಲ್ಲಿರಬೇಕಿತ್ತು. ಆದರೆ ಜೈಲಾಧಿಕಾರಿಗಳು ಆತನಿಗೆ ಅನಾರೋಗ್ಯದ ನೆಪವೊಡ್ಡಿ ಮಿಮ್ಸ್ ಆಸ್ಪತ್ರೆಯ ಸ್ಪೆಷಲ್ ರೂಮ್ನಲ್ಲಿ ಅಡ್ಮಿಟ್ ಮಾಡಿಸಿ ವಿಐಪಿ ಸೌಲಭ್ಯ ಒದಗಿಸಿದ್ದರು.

ರೇಡ್ ವೇಳೆ ಬಯಲಾದ ಅಕ್ರಮಗಳು
ನ್ಯಾಯಾಧೀಶರು ಸ್ಥಳದಲ್ಲಿದ್ದ ವೈದ್ಯಾಧಿಕಾರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆರೋಪಿಗೆ ಆಸ್ಪತ್ರೆಗೆ ದಾಖಲಾಗುವಂತಹ ಯಾವುದೇ ಗಂಭೀರ ಕಾಯಿಲೆ ಇಲ್ಲ ಎಂಬ ಸತ್ಯ ಬಹಿರಂಗಪಡಿಸಿದ್ದಾರೆ.
ಸ್ಪೆಷಲ್ ರೂಮ್ನಲ್ಲಿ ಯುವತಿಯ ಸಾಥ್
ನ್ಯಾಯಾಧೀಶರು ಕೊಠಡಿಗೆ ಭೇಟಿ ನೀಡಿದ ವೇಳೆ ಆರೋಪಿ ಮಹಮದ್ ಹುಸೇನ್ ಜೊತೆ ಯುವತಿಯೊಬ್ಬಳು ಪತ್ತೆಯಾಗಿದ್ದಾಳೆ. ವಿಚಾರಣೆ ವೇಳೆ ಆಕೆ ತಾನು ಆರೋಪಿಯ ಗೆಳತಿ ಎಂದು ಹೇಳಿಕೊಂಡಿದ್ದಾಳೆ.
ಕಾಯಿಲೆ ಇಲ್ಲದಿದ್ದರೂ ನ್ಯಾಯಾಲಯದ ಅನುಮತಿ ಪಡೆಯದೇ ಆಸ್ಪತ್ರೆಗೆ ಏಕೆ ದಾಖಲಿಸಿದ್ದೀರಿ ಎಂದು ಜೈಲಾಧಿಕಾರಿಯನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ. ಜೈಲಿನ ವೈದ್ಯರ ಸಲಹೆ ಮೇರೆಗೆ ದಾಖಲಿಸಿದ್ದೇವೆ, ಮುಂದೆ ಕೋರ್ಟ್ಗೆ ತಿಳಿಸುತ್ತೇವೆ ಎಂದು ಅಧಿಕಾರಿಗಳು ನುಣುಚಿಕೊಳ್ಳಲು ಯತ್ನಿಸಿದ್ದಾರೆ.
ಜೈಲಾಧಿಕಾರಿಗಳು ಹಾಗೂ ಮಿಮ್ಸ್ ವೈದ್ಯಾಧಿಕಾರಿಗಳ ಈ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ಘಟನೆ ಕುರಿತು ತಕ್ಷಣವೇ ಸಮಗ್ರ ವರದಿ ನೀಡುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
