-ಇಂದೇ ಮಂಡ್ಯದ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ
ಮಂಡ್ಯ: ಸಕ್ಕರೆ ನಾಡು ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಅಧಿಕೃತವಾಗಿ ಜೆಡಿಎಸ್ಗೆ ಬಿಟ್ಟು ಕೊಟ್ಟಿದೆ. ಇದೀಗ ಜೆಡಿಎಸ್ನಿಂದ ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಇಬ್ಬರಲ್ಲಿ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋ ಕುತೂಹಲಕ್ಕೆ ಇಂದೇ ತೆರೆ ಬೀಳುವ ಸಾಧ್ಯತೆ ಇದೆ.
ಇಷ್ಟು ದಿನಗಳ ಕಾಲ ಜೆಡಿಎಸ್ ನಾಯಕರು ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ನಮಗೆ ಬೇಕು ಎಂದು ಒತ್ತಾಯಿಸುತ್ತಿದ್ದರು. ಮತ್ತೊಂದು ಕಡೆ ಹಾಲಿ ಸಂಸದೆ ಸುಮಲತಾ ಅಂಬರೀಶ್ ನನಗೆ ಸಿಗುತ್ತೆ ಎಂಬ ವಿಶ್ವಾಸದಲ್ಲಿದ್ದರು. ಇದೀಗ ಅಂತಿಮವಾಗಿ ಬಿಜೆಪಿ ಜೆಡಿಎಸ್ಗೆ ಮಂಡ್ಯವನ್ನು ಬಿಟ್ಟು ಕೊಟ್ಟಿರೋದಾಗಿ ಅಧಿಕೃತ ಆದೇಶ ಮಾಡಿದೆ. ಇದೀಗ ಜೆಡಿಎಸ್ನಿಂದ ಮೈತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಇದನ್ನೂ ಓದಿ: ವಾಣಿಜ್ಯೋದ್ಯಮಿ ಪಲ್ಲವಿ ಡೆಂಪೊಗೆ ಟಿಕೆಟ್ – ಗೋವಾ ಇತಿಹಾಸದಲ್ಲೇ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮೊದಲ ಮಹಿಳೆ
ಮಂಡ್ಯ ಜಿಲ್ಲೆಯ ಎಲ್ಲಾ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಅಥವಾ ನಿಖಿಲ್ ಇಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಅಂತ ಒತ್ತಾಯಿಸುತ್ತಿದ್ದರು. ಇದಕ್ಕೆ ಕುಮಾರಸ್ವಾಮಿ ಅವರೂ ಮಾರ್ಚ್ 25ಕ್ಕೆ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಮಂಡ್ಯ ಜಿಲ್ಲೆಯ ನಾಯಕರ ಹಾಗೂ ಕಾರ್ಯಕರ್ತರ ಆಗ್ರಹಕ್ಕೆ ಮಣಿದು ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆಗೆ ಒಪ್ಪಿದ್ರು. ಆದ್ರೆ ಇದೀಗ ಚನ್ನಪಟ್ಟಣದ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರು ರಾಮನಗರ ಬಿಟ್ಟು ಹೋಗಬಾರದು. ನಿಖಿಲ್ ಅವರು ಮಂಡ್ಯದಿಂದ ಸ್ಪರ್ಧೆ ಮಾಡಲಿ ಎಂದು ಒತ್ತಾಯ ಮಾಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಹಾಗೂ ನಿಖಿಲ್ ಇಬ್ಬರಲ್ಲಿ ಯಾರು ಅಭ್ಯರ್ಥಿ ಆಗುತ್ತಾರೆ ಎಂಬ ಗೊಂದಲ ಉಂಟಾಗಿದ್ದು, ಇಂದೇ ತೆರೆ ಬೀಳುವ ಸಾಧ್ಯತೆಗಳಿವೆ.
ಭಾನುವಾರ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಬೆಂಗಳೂರಿನಲ್ಲಿರುವ ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ ಮತ್ತೆ ನೀವು ಅಥವಾ ನಿಖಿಲ್ ಇಬ್ಬರಲ್ಲಿ ಒಬ್ಬರು ಬರಲೇ ಬೇಕೆಂದು ಕುಮಾರಸ್ವಾಮಿ ಅವರಿಗೆ ದುಂಬಾಲು ಬಿದ್ದಿದ್ದರು. ಇದಕ್ಕೆ ಕುಮಾರಸ್ವಾಮಿ ಅವರು ಮಂಡ್ಯ ಕಾರ್ಯಕರ್ತರ ಆಸೆ ನಿರಾಸೆ ಮಾಡಲ್ಲ ಚನ್ನಪಟ್ಟಣ ಕಾರ್ಯಕರ್ತರನ್ನು ಕರೆದು ಮಾತಾಡುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರ ಸುಳ್ಳು ಹೇಳ್ತಿದೆ, ಬರ ಪರಿಹಾರವನ್ನ ನ್ಯಾಯಾಲಯವೇ ತೀರ್ಮಾನಿಸಲಿ: ನಿರ್ಮಲಾ ಸೀತಾರಾಮನ್
ದಳಪತಿ ಲೆಕ್ಕಾಚಾರ ಏನು?
* ಮಂಡ್ಯ ಜಿಲ್ಲೆಯಲ್ಲಿ ಕುಮಾರಸ್ವಾಮಿ ನಿಂತ್ರೆ ಗೆಲುವು ಸುಲಭ ಅನ್ನುವ ಲೆಕ್ಕಾಚಾರ.
* 1 ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಶಾಸಕರು ಇದ್ದಾರೆ. ಉಳಿದ ಕಡೆ ಕಾಂಗ್ರೆಸ್ ಶಾಸಕರು ಇದ್ದಾರೆ. ಶಾಸಕರ ಪ್ರಭಾವ ಮೀರಿ ಗೆಲ್ಲುವ ಸಾಮರ್ಥ್ಯ ಕುಮಾರಸ್ವಾಮಿ ಇದೆ ಎಂಬ ಲೆಕ್ಕಾಚಾರ.
* 2019ರ ಚುನಾವಣೆಯಲ್ಲಿ ಪುತ್ರನ ಸೋಲು ಮತ್ತು ಕಳೆದ ವಿಧಾನಸಭೆಯಲ್ಲಿ ಜೆಡಿಎಸ್ ಸೋಲಿನ ಅನುಕಂಪ ಕುಮಾರಸ್ವಾಮಿ ಮೇಲೆ ಇದೆ. ಇದು ಚುನಾವಣೆಯಲ್ಲಿ ವರ್ಕ್ ಆಗುವ ಲೆಕ್ಕಾಚಾರ.
* ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಿದ್ರೆ ಹಳೇ ಮೈಸೂರು ಭಾಗದ ಹಲವು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಪ್ಲಸ್ ಪಾಯಿಂಟ್ ಆಗೋ ತಂತ್ರಗಾರಿಕೆ.
* ಬಿಜೆಪಿಯ ಹೈಕಮಾಂಡ್ ಮತ್ತು ಜೆಡಿಎಸ್ ನಡೆಸಿರೋ ಸರ್ವೆಗಳಲ್ಲಿ ಕುಮಾರಸ್ವಾಮಿ ನಿಂತರೆ ಗೆಲುವು ಸುಲಭ ಅನ್ನೋ ರಿಪೋರ್ಟ್.
* ಮಂಡ್ಯದಲ್ಲಿ ಕಾಂಗ್ರೆಸ್ ಕಟ್ಟಿ ಹಾಕಬೇಕಾದ್ರೆ ಕುಮಾರಸ್ವಾಮಿ ಪ್ರಬಲ ಅಭ್ಯರ್ಥಿ ಅನ್ನುವ ಲೆಕ್ಕಾಚಾರ.