ಬೆಂಗಳೂರು: 60 ಸಾವಿರ ಲೀಡ್ ಕೊಡಿ ನನ್ನ ಮುಟ್ಟೋಕಾಗಲ್ಲ ಎಂದು ಸಿಎಂ ಸಿದ್ದರಾಮಯ್ಯನವರ (Cm Siddaramaiah) ಭಾವನಾತ್ಮಕ ಭಾಷಣದ ಹಿಂದೆ 9 ಸಾವಿರ ಮತಗಳ ಕಥೆಯಿದೆ.
ಸೋಮವಾರ ವರುಣಾ (Varuna) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಳಿಗೆರೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದರು.
ತಮ್ಮ ಭಾಷಣದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) 60 ಸಾವಿರ ಮತಗಳ ಲೀಡ್ ನೀಡುವ ಮೂಲಕ ಚಾಮರಾಜನಗರ (Chamarajanagara) ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನೀಲ್ ಬೋಸ್ (Sunil Bose) ಅವರನ್ನು ಗೆಲ್ಲಿಸಬೇಕು. ಅವರು ಗೆದ್ದರೆ ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇಲ್ಲ: ಸಿದ್ದರಾಮಯ್ಯ
ಸಿದ್ದರಾಯ್ಯನವರ ಟೆನ್ಷನ್ಗೆ ಅಸಲಿ ಕಾರಣ 9 ಸಾವಿರ ಮತ. 2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಧ್ರುವನಾರಾಯಣ ಅವರು ಅತಿ ಹೆಚ್ಚಿನ ಲೀಡ್ ನಿರೀಕ್ಷಿಸಿದ್ದರು
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು 58,616 ಮತಗಳ ಅಂತರದಿಂದ ಗೆದ್ದಿದ್ದರು. ಸಿಎಂ ಸಿದ್ದರಾಮಯ್ಯನವರ ಕ್ಷೇತ್ರ ಜೊತೆಗೆ ಈಗ ಮಗನ ಕ್ಷೇತ್ರವಾಗಿರುವ ವರುಣಾದಿಂದ ನನಗೆ ಅತಿ ಹೆಚ್ಚು ಲೀಡ್ ಸಿಗಬಹುದು ಎಂದು ಧ್ರುವನಾರಾಯಣ(Dhruvanarayana) ಅವರು ವಿಶ್ವಾಸದಲ್ಲಿದ್ದರು. ಆದರೆ ಫಲಿತಾಂಶದ ದಿನ ವರುಣಾದಿಂದ ಕೇವಲ 9 ಸಾವಿರ ಮತಗಳ ಲೀಡ್ ಮಾತ್ರ ಕಾಂಗ್ರೆಸ್ಗೆ ಸಿಕ್ಕಿತ್ತು. ಕಾಂಗ್ರೆಸ್ಗೆ 79,404 ಮತ ಬಿದ್ದರೆ ಬಿಜೆಪಿಗೆ 70,402 ಮತ ಬಿದ್ದಿತ್ತು.
2023ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು 46,163 ಮತಗಳ ಅಂತರದಿಂದ ಗೆದ್ದಿದ್ದರು. 2018 ಮತ್ತು 2023ಕ್ಕೆ ಹೋಲಿಸಿದರೆ ಕಾಂಗ್ರೆಸ್ ಗೆಲುವಿನ ಅಂತರದ ಮತ ಪ್ರಮಾಣ 10 ಸಾವಿರ ಕಡಿಮೆಯಾಗಿದೆ. 2019ರಲ್ಲಿ ಆದಂತೆ ಈ ಬಾರಿಯೂ ಮತದಾರರ ಕೈಕೊಡಬಾರದು ಎಂದು ಸಿದ್ದರಾಮಯ್ಯ ಈಗ ವರುಣಾ ಕ್ಷೇತ್ರದಲ್ಲಿ ಭಾವನಾತ್ಮಕ ಕಾರ್ಡ್ ಪ್ರಯೋಗ ಮಾಡಿದ್ದಾರೆ. ಇದನ್ನೂ ಓದಿ: ಬಾವನನ್ನು ಗೆಲ್ಲಿಸಲು ಪಣ – ಬೆಂಗಳೂರು ಗ್ರಾಮಾಂತರವನ್ನು ಪ್ರತಿಷ್ಠೆಯಾಗಿ ಹೆಚ್ಡಿಕೆ ತೆಗೆದುಕೊಂಡಿದ್ದು ಯಾಕೆ?
ತನ್ನ ಭಾಷಣದಲ್ಲಿ ಇನ್ನು ವರುಣದಲ್ಲಿ ಭಾವನಾತ್ಮಕವಾಗಿ ಮತ ಕೇಳಿದ ವಿಚಾರಕ್ಕೆ ಮಂಗಳವಾರ ಪ್ರತಿಕ್ರಿಯಿಸಿ, ಅದೇನು ಭಾವನಾತ್ಮಕ ಭಾಷಣ ಅಲ್ಲ. ಹೆಚ್ಚು ಲೀಡ್ ಬೇಕು ಎಂದು ಸ್ವಕ್ಷೇತ್ರದವರನ್ನು ಕೇಳಿದ್ದೇನೆ ಅಷ್ಟೇ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮಗೆ ಬರಿ 9,000 ಲೀಡ್ ಬಂದಿತ್ತು. ಈ ಬಾರಿ ಅದನ್ನು 60,000 ಮುಟ್ಟಿಸಿ ಎಂದು ಹೇಳಿದ್ದೇನೆ. ಅದಕ್ಕೆ ಬೇರೆ ರೀತಿಯ ವಿಶ್ಲೇಷಣೆ ಏನು ಇಲ್ಲ. ಅದು ನನ್ನ ಸಹಜವಾದ ಮಾತುಗಳು ಅಷ್ಟೇ ಎಂದು ಸ್ಪಷ್ಟನೆ ನೀಡಿದರು.