– ಜೆಡಿಎಸ್-ಬಿಜೆಪಿಗೆ ಬಿಸಿತುಪ್ಪವಾದ ಇಬ್ಬರ ಮುನಿಸು
ಹಾಸನ: ಲೋಕಸಭೆ ಚುನಾವಣೆಯಲ್ಲಿ (Lok Sabha Election) ಬಿಜೆಪಿ-ಜೆಡಿಎಸ್ (BJP-JDS) ಮೈತ್ರಿ ಮಾಡಿಕೊಂಡಿದ್ದರೂ ದೇವೇಗೌಡರ (HD Devegowda) ತವರು ಹಾಸನದಲ್ಲಿ ಮಾಜಿ ಶಾಸಕ ಪ್ರೀತಂಗೌಡ (Pretham Gowda) ದಳಪತಿಗಳ ಮುನಿಸು ಮುಂದುವರಿದಿದೆ. ಹಾಸನದಲ್ಲಿ ಮಾತ್ರವಲ್ಲದೇ ಮೈಸೂರಿನಲ್ಲಿ ನಡೆದ ಪ್ರಧಾನಿ ಮೋದಿ (PM Narendra Modi) ಕಾರ್ಯಕ್ರಮದಲ್ಲೂ ಈ ಮುನಿಸು ಬಹಿರಂಗಗೊಂಡಿದೆ. ಪ್ರಜ್ವಲ್ ರೇವಣ್ಣ-ಪ್ರೀತಂಗೌಡ ಮುಖಾಮುಖಿಯಾದರೂ ಮಾತನಾಡದೇ ಮುನಿಸು ಮುಂದುವರಿಸಿದ್ದಾರೆ.
ಭಾನುವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜಂಟಿ ಚುನಾವಣಾ ಪ್ರಚಾರ ಸಭೆ ನಡೆಯಿತು. ಈ ಸಭೆಯಲ್ಲಿ ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ಅಭ್ಯರ್ಥಿಗಳು ಹಾಗೂ ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗಿಯಾಗಿದ್ದರು.
ಕೊಂಚ ತಡವಾಗಿ ವೇದಿಕೆಗೆ ಏರಿದ ಪ್ರಜ್ವಲ್ ರೇವಣ್ಣ (Prajwal Revanna) ವೇದಿಕೆಯಲ್ಲಿ ಆಸೀನರಾಗಿದ್ದ ಎಲ್ಲರಿಗೂ ಹಸ್ತಲಾಘವ ಮಾಡಿದರು. ಪ್ರತಾಪ್ ಸಿಂಹ ಮೊದಲಾದವರನ್ನು ಆಲಂಗಿಸಿಕೊಂಡರು. ಪ್ರೀತಂಗೌಡ ವೇದಿಕೆ ಹಂಚಿಕೊಂಡಿದ್ದರೂ ದೋಸ್ತಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪ್ರೀತಂಗೌಡ ಮುಖ ನೋಡಲಿಲ್ಲ, ಮಾತನಾಡಲಿಲ್ಲ. ಪ್ರೀತಂ ಬಿಟ್ಟು ಉಳಿದವರತ್ತ ಗಮನ ಹರಿಸಿದರು. ಅಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲೂ ಇಬ್ಬರು ಯುವ ನಾಯಕರು ಪ್ರತಿಷ್ಠೆ ಬಿಡದೇ ಇರುವುದು ಜಗಜ್ಜಾಹೀರಾಗಿದೆ. ಹೀಗಾಗಿ ಇಬ್ಬರ ನಡುವಿನ ಮುನಿಸು ಮುಂದೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿದೆ.
ಪ್ರೀತಂಗೌಡ-ಪ್ರಜ್ವಲ್ ಪ್ರತಿಷ್ಠೆಯ ನಡೆ ಮೈತ್ರಿ ನಾಯಕರಿಗೆ ಬಿಸಿತುಪ್ಪವಾಗಿದೆ. ಇವರಿಬ್ಬರ ಮುನಿಸು ಹಾಸನದಲ್ಲಿ ಏನೆಲ್ಲಾ ಪರಿಣಾಮ ಉಂಟು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಹಾಸನದ ಹೊಳೆನರಸೀಪುರ ಹಾಗೂ ಸಕಲೇಶಪುರದಲ್ಲಿ ರೋಡ್ ಶೋ ನಡೆಸುತ್ತಿದ್ದು, ಪ್ರೀತಂಗೌಡ ಭಾಗಿಯಾಗುತ್ತಾರೋ ಇಲ್ಲವೋ ಕಾದುನೋಡಬೇಕಿದೆ.