ಮಂಡ್ಯ: ಅಪ್ಪನಿಗೆ ಹುಟ್ಟಿದ್ರೆ ಟೀಕೆ ಮಾಡ್ರೀ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಮದ್ದೂರು ಎಳನೀರು ಮಾರುಕಟ್ಟೆ ಬಳಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಿದ್ದ ವೇಳೆ ಮಾತನಾಡಿದ ಸಚಿವರು, ಎಳನೀರು ಮಾರುಕಟ್ಟೆ ಒಳಗೆ ಕೆಲವರು ಮಜಾ ಮಾಡಿಕೊಂಡು ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನೀವು ಟೀಕೆ ಮಾಡುವುದನ್ನು ನಾನು ಕೇಳಿದ್ದೇನೆ. ತಾಕತ್ ಇದ್ದರೆ, ಅಪ್ಪನಿಗೆ ಹುಟ್ಟಿದ್ರೆ ಬಂದು ಎದುರಿಗೆ ನಿಂತು ಟೀಕೆ ಮಾಡಿ ಎಂದರು.
ಎಳನೀರು ಮಾರುಕಟ್ಟೆಯ ಚರಿತ್ರೆ ನನಗೆ ಗೊತ್ತು. ಸಿಎಂ ಕುಮಾರಸ್ವಾಮಿ ಹಾಗೂ ನಾನು ಎಳನೀರು ಮಾರುಕಟ್ಟೆಯ ಅಭಿವೃದ್ಧಿ ಶ್ರಮಿಸಿದ್ದೇವೆ. ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನದ ತಂದು ಸಾಕಷ್ಟು ಕೆಲಸಗಳನ್ನು ಮಾಡಿಸಿದ್ದೇನೆ. ಆದರೆ ಕೆಲವರು ಮಾರುಕಟ್ಟೆಯಲ್ಲಿ ಹಣ ಮಾಡಿಕೊಂಡು ಈಗ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ. ಅಂತಹವರು ಯಾರಾರು ಇದ್ರೆ ಮುಂದೆ ಬನ್ನಿ ಎಂದು ಸವಾಲು ಹಾಕಿದರು.
ಪ್ರಚಾರದ ವಾಹನದಲ್ಲಿಯೇ ನಿಂತು ಸಚಿವರು ವಾಗ್ದಾಳಿ ನಡೆಸಿದ್ದರು. ಈ ವೇಳೆ ಕೆಲವರು ಡಿ.ಸಿ.ತಮ್ಮಣ್ಣ ಅವರ ಮನವೊಲಿಸಿ ವಾಹನದಿಂದ ಕೆಳಗೆ ಇಳಿದು ಬರುವಂತೆ ಮನವಿ ಮಾಡಿಕೊಂಡರು. ಎಷ್ಟೇ ಕರೆದರೂ ಸಚಿವರು ಮಾತ್ರ ವಾಗ್ದಾಳಿ ಮುಂದುವರಿಸಿದರು. ಕೆಲ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಪರ ಘೋಷಣೆ ಕೂಗಿದರು.
ನಾನು ಮದ್ದೂರು ಕ್ಷೇತ್ರದಲ್ಲಿ ಇರುವವರೆಗೂ ಇಲ್ಲಿನ ಜನರ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಮುಂದೆ ಬರುವ ಅಭ್ಯರ್ಥಿಗೆ ನಿಮ್ಮ ಕೊಡುಗೆ ಏನು ಅಂತ ನೀವು ಪ್ರಶ್ನಿಸಬೇಕು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ ಹಾಗೂ ನಾನು ಈ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ್ದೇವೆ. ಈಗ ಕೆಲವರು ರಾಜಕೀಯ ಆರಂಭಿಸಿದ್ದಾರೆ. ಅವರ ಮಾತಿಗೆ ಕಿವಿ ಕೊಡಬೇಡಿ ಎಂದು ಮತದಾರರಲ್ಲಿ ಸಚಿವರು ಮನವಿ ಮಾಡಿಕೊಂಡರು.