ಚಾಮರಾಜನಗರ: ಲಾಕ್ಡೌನ್ ಪರಿಣಾಮ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗದೆ ಹೆತ್ತವರು ಸಂಕಟ ಪಡುತ್ತಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆದಿದೆ.
ಕೂಲಿಗಾಗಿ ಬಂದ ಧಾರವಾಡ ಮೂಲದ 14 ವಲಸೆ ಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅವರ ಕಷ್ಟ ಹೇಳತೀರದಾಗಿದೆ. ಈ ಪೈಕಿ ಗುರುನಾಥ್ ಮತ್ತು ತುಳಸಮ್ಮನ ಅವರ ಚಿಕ್ಕ ಮಗುವಿನ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಹೆತ್ತವರು ಒದ್ದಾಡುತ್ತಿದ್ದಾರೆ.
ಗುರುನಾಥ್ ದಂಪತಿ ಧಾರವಾಡ ಜಿಲ್ಲೆ ಕುಂಬಾರಕೊಪ್ಪ ಗ್ರಾಮದವರಾಗಿದ್ದು, ಕೊಳ್ಳೇಗಾಲದ ಚೆಸ್ಕಾಂ ಕಟ್ಟಡ ನಿರ್ಮಾಣಕ್ಕೆ ಬಂದಿದ್ದಾರೆ. ಆದರೆ ಅವರ ಮಗುವಿಗೆ ಚಿಕ್ಕ ವಯಸ್ಸಿನಿಂದಲೂ ನರ ದೌರ್ಬಲ್ಯ ಸಮಸ್ಯೆ ಇದೆ. 3 ತಿಂಗಳಿಗೊಮ್ಮೆ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ಹೋಗಿ ಮಗುವನ್ನು ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಲಾಕ್ಡೌನ್ ಪರಿಣಾಮ ಬೆಳಗಾವಿಗೆ ತೆರಳಲು ಸಾಧ್ಯವಾಗುತ್ತಿಲ್ಲ.
ಮಗು ನೋವಿನಿಂದ ದಿನವಿಡೀ ಅಳುತ್ತಿದೆ ಎಂದು ತಂದೆ ಗುರುನಾಥ್ ಸುದ್ದಿಗಾರರ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಜಿಲ್ಲಾಡಳಿತ ಮಗುವಿನ ಆರೋಗ್ಯದ ದೃಷ್ಟಿಯಿಂದ ಚಿಕಿತ್ಸೆಗಾಗಿ ಬೆಳಗಾವಿಗೆ ಆಸ್ಪತ್ರೆಗೆ ಕಳುಹಿಸಿಕೊಡಬೇಕು. ಕುಟುಂಬ ತೊರೆದು ವಲಸೆ ಬಂದಿದ್ದೇವೆ. ದಯಮಾಡಿ ಸಹಾಯ ಮಾಡಬೇಕು ಎಂದು ವಲಸೆ ಕಾರ್ಮಿಕರು ಮನವಿ ಮಾಡಿದ್ದಾರೆ.