ಬೆಂಗಳೂರು: ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಯಿಂದ ನಗರದ ರಾಮಯ್ಯ ಆಸ್ಪತ್ರೆಗೆ ರಸ್ತೆಯ ಮೂಲಕವೇ ಜೀವಂತ ಹೃದಯ ಸಾಗಿಸಲಾಗಿದೆ.
ನಗರದ ರಾಮಯ್ಯ ಆಸ್ಪತ್ರೆಯಲ್ಲಿ ಕಾರ್ಡಿಯೋ ಮೈಯೋಪತಿ ಖಾಯಿಲೆಯಿಂದ 19 ವರ್ಷದ ಯುವಕನ ಬಳಲುತ್ತಿದ್ದ. ಹೀಗಾಗಿ ಪ್ರಪ್ರಥಮ ಬಾರಿಗೆ ರಸ್ತೆಯ ಮೂಲಕ ಮೈಸೂರಿನಿಂದ ನಗರದ ರಾಮಯ್ಯ ಆಸ್ಪತ್ರೆಗೆ ಹೃದಯವನ್ನು ರವಾನಿಸಲಾಗಿದೆ.
ರಾಮಯ್ಯ ಆಸ್ಪತ್ರೆಯ ಇತಿಹಾಸದಲ್ಲಿ ಇದು 20ನೇ ಹೃದಯ ಕಸಿ ಶಸ್ತ್ರಚಿಕಿತ್ಸೆಯಾಗಿದೆ. ಈ ಕುರಿತು ರಾಮಯ್ಯ ಆಸ್ಪತ್ರೆಯ ಹೃದಯಕಸಿ ತಜ್ಞರಾದ ಡಾ.ನಾಗಮಲ್ಲೇಶ್ ಮಾತನಾಡಿ, ಮೈಸೂರಿನಲ್ಲಿ ಬ್ರೈನ್ಡೆಡ್ ಆದ ರೋಗಿಯ ಹೃದಯವನ್ನು ಇಂದು ನಮ್ಮ ಆಸ್ಪತ್ರೆಯ ರೋಗಿಗೆ ಯಶಸ್ವಿಯಾಗಿ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯವನ್ನ ರಸ್ತೆ ಮಾರ್ಗವಾಗಿ ತಂದು ಕಸಿ ಮಾಡಿದ್ದು, ಮೈಸೂರು, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಪೊಲೀಸರು ಗ್ರೀನ್ ಕಾರಿಡಾರ್ ಮಾಡುವ ಮೂಲಕ ಜೀವಂತ ಹೃದಯವೂ ಮೈಸೂರಿನಿಂದ ಬೆಂಗಳೂರಿಗೆ ತಲುಪಲು ಸಹಕರಿಸಿದ್ದಾರೆ.