ಬೆಂಗಳೂರು: ಡಿ.ಕೆ ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿ ಆಗಲಿ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (Ashwath Narayan) ಶುಭ ಹಾರೈಸಿದ್ದಾರೆ.
ಇಂದು ಶೇಷಾದ್ರಿಪುರಂ ಗುಂಡೂರಾವ್ ಕ್ರೀಡಾಂಗಣದಲ್ಲಿ ಪಶ್ಚಿಮ ವಲಯದ ಮಲ್ಲೇಶ್ವರಂ, ಗಾಂಧಿನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನ ಒಟ್ಟುಗೂಡಿಸಿಕೊಂಡು ಜನಸ್ಪಂದನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಶ್ವಥ್ ನಾರಾಯಣ್ ಅವರು ವೇದಿಕೆ ಮೇಲೆಯೇ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಅಂತಾ ಆಶಿಸಿದರು.
ಜನರನ್ನ ನೇರವಾಗಿ ತಲುಪುವ ಕೆಲಸವನ್ನು ಡಿಕೆ ಶಿವಕುಮಾರ್ ಅವರು ಮಾಡುತ್ತಿದ್ದಾರೆ. ಅವರಿಗೆ ಈಗ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ. ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅಂತಾ ಆಶಿಸುತ್ತಾ ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆ ಹೋಗಿ ಮುಖ್ಯಮಂತ್ರಿ ಕೂಡ ಆಗಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: ಮಂದಿರ ಕೆಡವಿ ಕಟ್ಟಿದ ಮಸೀದಿಯಲ್ಲಿ ನಮಾಜ್ ಮಾಡಿದ್ರೆ ಹರಾಮ್ ಆಗುತ್ತೆ ಅಂತಾ ಮುಸ್ಲಿಮರಿಗೂ ಅನಿಸಬಹುದು: ಸಿ.ಟಿ.ರವಿ
ಕರ್ನಾಟಕ ಸರ್ಕಾರ ಉತ್ತಮವಾದ ಕಾರ್ಯಕ್ರಮ ರೂಪಿಸಿದೆ. ನಮ್ಮ ಪಶ್ಚಿಮ ವಲಯದಲ್ಲಿ ನಡೆಯುತ್ತಿದೆ. ಡಿಕೆ ಶಿವಕುಮಾರ್ ಅವರ ನಾಯಕತ್ವದಲ್ಲಿ ಕಾರ್ಯಕ್ರಮ ರೂಪಿಸಿದ್ದಾರೆ. ಜನರ ಕುಂದುಕೊರತೆಗಳನ್ನ ಆಲಿಸುತ್ತಾ ಇದ್ದಾರೆ ಅವರಿಗೆ ಹೃತ್ಪೂರ್ವಕವಾದ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ಬೆಂಗಳೂರು ನಗರ ಭರವಸೆ ನಗರ. ಬದುಕು ಕಟ್ಟಿಕೊಳ್ಳೋಕೆ ಈ ಕನಸಿನ ನಗರದಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದಾರೆ. ಬಹುದೊಡ್ಡ ಕೀರ್ತಿ ಈ ನಗರಕ್ಕೆ ಇದೆ. ಅದೇ ರೀತಿ ಕೊರತೆ ಕೂಡ ಇದೆ. ಬೆಂಗಳೂರು ನಗರದಲ್ಲಿ ಶ್ರಮಿಕರು ತುಂಬಾ ಜನ ಇದ್ದಾರೆ, ಬಡವರೂ ಇದ್ದಾರೆ, ಅವರ ಕೈ ಹಿಡಿಯುವಂತಹ ಕೆಲಸ ಡಿಕೆ ಶಿವಕುಮಾರ್ ಮಾಡಲಿ. ವಸತಿ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಿ ಎಂದು ಮಾಜಿ ಡಿಸಿಎಂ ಆಗ್ರಹಿಸಿದರು.
ಇದೇ ವೇಳೆ ಆಸ್ತಿ ತೆರಿಗೆ ಬಗ್ಗೆ ಪ್ರಸ್ತಾಪ ಮಾಡಿದ ಅಶ್ವಥ್ ನಾರಾಯಣ್, ಹಳೆಯ ಬಾಕಿ ಎಲ್ಲಾ ಸೇರಿ ಆಸ್ತಿ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ ಆಸ್ತಿ ತೆರಿಗೆ ಬಗ್ಗೆ ಗಮನ ಹರಿಸಿ. ಮೂರು ವರ್ಷ ಮುಂಚಿತವಾದ ಆಸ್ತಿ ತೆರಿಗೆ ಕಟ್ಟುವುದಕ್ಕೆ ವಿನಾಯಿತಿ ಕೊಡಿ. ಜನರಿಗೆ ಆಸ್ತಿ ತೆರಿಗೆ ನೋಟಿಸ್ ಕೊಡುತ್ತಿದ್ದಾರೆ. ಅಧಿಕಾರಿಗಳ ಜೊತೆ ಮಾತಾಡಿ ಆಸ್ತಿ ತೆರಿಗೆ ಕಡಿಮೆ ಮಾಡಲಿ ಎಂದರು.
ಟ್ರಾಫಿಕ್ ಸಮಸ್ಯೆ (Traffic) ನಿವಾರಣೆಗೆ ಮಿನಿ ಬಸ್ಗಳಿಗೆ ಹೆಚ್ಚು ಆದ್ಯತೆ ಕೊಡಿ. ಫುಟ್ ಪಾತ್ ಗಳನ್ನ ಒತ್ತುವರಿ ಮಾಡುತ್ತಿದ್ದಾರೆ. ಫುಟ್ ಪಾತ್ ಗಳನ್ನ ತೆರವು ಮಾಡುವ ಕೆಲಸ ಮಾಡಿದ್ದೀರಿ. ವಯಸ್ಸಾದವರು ಯಾರೂ ಫುಟ್ಪಾತ್ನಲ್ಲಿ ಓಡಾಡೋಕೆ ಆಗ್ತಿಲ್ಲ. ನಾಗರೀಕರು ಫುಟ್ ಪಾತ್ ಮೇಲೆ ಓಡಾಡುವಂತೆ ಮಾಡಿ ಎಂದು ಹೇಳಿದರು.
ನಮ್ಮ ಬೆಂಗಳೂರಿನಲ್ಲಿ ಇರುವ ಶಾಲೆಗಳಿಗೆ ಹೆಚ್ಚಿನ ವ್ಯವಸ್ಥೆ ಮಾಡಿಕೊಡಿ. ಇನ್ನಷ್ಟು ಶಾಲೆಗಳನ್ನ ಹೆಚ್ಚಿಸಿ. ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಲೇಜ್ ಇಲ್ಲ, ಪಾಲಿಟೆಕ್ನಿಕ್ ಗಳೂ ಇಲ್ಲ, ಅವುಗಳನ್ನು ಓಪನ್ ಮಾಡುವಂತ ಕೆಲಸ ಮಾಡಿ. ಪೌರ ಕಾರ್ಮಿಕರ ಕೊರತೆ ಬಗ್ಗೆ ಪ್ರಸ್ತಾಪಿಸಿ, ಪೌರಕಾರ್ಮಿಕರನ್ನ ನೇಮಕ ಮಾಡಿಕೊಳ್ಳಿ. ಪೌರ ಕಾರ್ಮಿಕರ ಸಮಸ್ಯೆ ನಿವಾರಿಸಿ ಎಂದರು.