ಮಂಗಳೂರು: ಸಾಮಾನ್ಯವಾಗಿ ದೀಪ ಉರಿಸುವುದಕ್ಕೆ ಹತ್ತಿ ಅಥವಾ ಬಟ್ಟೆಯ ಬತ್ತಿಯನ್ನು ಬಳಸುತ್ತೇವೆ. ಆದರೆ ಹತ್ತಿಯ ಬತ್ತಿಗಿಂತಲೂ ಪ್ರಕಾಶಮಾನವಾಗಿ ಉರಿಯುವ ಎಲೆಯೊಂದು ಕರಾವಳಿಯಲ್ಲಿ ಪತ್ತೆಯಾಗಿದೆ.
ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ನೆಲೆ ನಿಲ್ಲಲು ಕಾಡುಗಳಲ್ಲಿ ಮರದ ಪೊಟರೆಗಳನ್ನು ಬಳಸುತ್ತಿದ್ದರು. ಆಹಾರ ತಯಾರಿಕೆಗೆ, ಮಳೆ ಚಳಿಯಿಂದ ರಕ್ಷಿಸಲು ಕಲ್ಲಿನಿಂದ ಉಜ್ಜಿ ಬೆಂಕಿ ತಯಾರಿಸುತ್ತಿದ್ದರು ಎನ್ನುವುದು ಇತಿಹಾಸ. ಇದೀಗ ಇಂತಹುದೇ ಇತಿಹಾಸ ಸಾರುವ ಪುರಾತನ ಗಿಡವೊಂದು ಪ್ರಕೃತಿಯ ಮಡಿಲಲ್ಲಿ ಪತ್ತೆಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದ ಜಿನ್ನಪ್ಪ ಎಂಬವರ ರಬ್ಬರ್ ತೋಟದಲ್ಲಿ ಈ ಗಿಡ ಪತ್ತೆಯಾಗಿದೆ. ದೀಪಕ್ಕೆ ಎಣ್ಣೆ ಹಾಕಿ ಹತ್ತಿ ಬತ್ತಿಯ ಬದಲು ಈ ಗಿಡದ ಚಿಗುರೆಲೆಯನ್ನು ಎಣ್ಣೆಯಲ್ಲಿ ಅದ್ದಿ ಬೆಂಕಿ ಹಚ್ಚಿದ್ರೆ ದೀಪದಂತೆ ಉರಿಯುತ್ತದೆ. ಹತ್ತಿಯ ಬತ್ತಿಗಿಂತಲೂ ಪ್ರಕಾಶಮಾನವಾಗಿ ಉರಿಯುವ ಈ ಚಿಗುರೆಲೆಯನ್ನು ನೋಡಿ ಜನ ಆಶ್ಚರ್ಯಚಕಿತರಾಗಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕ KSRTC ಬಸ್ಗಳಲ್ಲಿ ಮೊಬೈಲ್ ಲೌಡ್ ಸ್ಪೀಕರ್ ಇಟ್ಟು ಸಾಂಗ್, ಸಿನಿಮಾ ನೋಡೋದಕ್ಕೆ ನಿರ್ಬಂಧ
ಬೆಳದಿಂಗಳ ರಾತ್ರಿಯಲ್ಲಿ ಈ ಗಿಡದ ಎಲೆಯ ಚಿಗುರುಗಳು ಪ್ರಕಾಶಮಾನವಾಗಿ ಮಿಂಚುತಿರುವುದನ್ನು ಜಿನ್ನಪ್ಪರು ಗಮನಿಸಿದ್ದರು. ಹೀಗಾಗಿ ಇದರಲ್ಲಿ ಬೆಳಕಿನ ಅಂಶ ಇರಬಹುದು ಎಂದು ತಿಳಿದು ಇದರ ಚಿಗುರು ತಂದು ಮನೆಯಲ್ಲಿ ಉರಿಸಿದ್ದಾರೆ. ಎಲೆಯ ಚಿಗುರು ನಿರಂತರ ಉರಿಯುವುದನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ಅಪರೂಪವಾಗಿ ಕಂಡ ಈ ಗಿಡದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದಾಗ ಇದು ಪ್ರಣತಿಪತ್ರ ಗಿಡ ಎಂದು ಗೊತ್ತಾಗಿದೆ. ಮಾನವ ಕಾಡಿನಲ್ಲಿ ಬದುಕಿದ್ದ ಸಂದರ್ಭ ಬೆಂಕಿಗಾಗಿ ಈ ಗಿಡವನ್ನು ಸಹ ಬಳಸುತ್ತಿದ್ದ ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ದೀಪದಲ್ಲಿ ಹತ್ತಿ ಅಥವಾ ಬಟ್ಟೆಯ ಬತ್ತಿಯನ್ನು ಒಂದೆರಡು ಗಂಟೆ ಉರಿಸಿದಲ್ಲಿ ಬತ್ತಿ ಕರಗಿ ಹೋಗುತ್ತದೆ. ಆದರೆ ಈ ಪ್ರಣತಿಪತ್ರದ ಚಿಗುರು ಎಣ್ಣೆ ಸುರಿಯುತ್ತಿರುವವರೆಗೂ ನಿರಂತರ ಉರಿಯುತ್ತದೆ. ಇದನ್ನೂ ಓದಿ: ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೈಲಿನಿಂದ ಬಿಡುಗಡೆ
ಪ್ರಣತಿಪತ್ರ ಗಿಡದ ಬದಲಾಗಿ ಇತರೇ ಯಾವುದೇ ಗಿಡದ ಚಿಗುರು ಬಳಸಿದರು ಅದು ಉರಿಯೋದಿಲ್ಲ. ಆದರೆ ಪ್ರಣತಿಪತ್ರ ಗಿಡದ ಚಿಗುರೆಲೆ ನಿರಂತರವಾಗಿ ಉರಿಯುತ್ತದೆ. ಒಟ್ಟಿನಲ್ಲಿ ಅಪರೂಪದಲ್ಲಿ ಕಾಣಸಿಕ್ಕಿರುವ ಈ ಗಿಡದ ವಿಶೇಷ ಗುಣ ಎಲ್ಲರ ಆಶ್ಚರ್ಯ ಮತ್ತು ಕುತೂಹಲಕ್ಕೆ ಕಾರಣವಾಗಿರೋದು ಮಾತ್ರ ಸುಳ್ಳಲ್ಲ.