ಬೆಂಗಳೂರು: ಊಟ ಮಾಡಲು ದುಡ್ಡು ಕೊಟ್ಟಿರಬಹುದು, ವಾಹನಗಳಿಗೆ ಬಾಡಿಗೆ ಕೊಡಬಾರದೇ? ಪೆಟ್ರೋಲ್ ಖರೀದಿಗೆ ದುಡ್ಡು ಬೇಡವೇ? ಬಿಜೆಪಿಯವರ ಆರೋಪ ಸುಳ್ಳು ಎಂದು ಕಾಂಗ್ರೆಸ್ ಮುಖಂಡ, ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಗುಂಡ್ಲುಪೇಟೆ ಉಪಚುನಾವಣೆಯ ಪ್ರಚಾರದ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ದುಡ್ಡನ್ನು ಹಂಚಿಕೆ ಮಾಡಿದ್ದಾರೆ ಎನ್ನುವ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನೋಡಿ ನಾನು ವಿಡಿಯೋ ನೋಡಿಲ್ಲ. ಶುಕ್ರವಾರ ಕೆಪಿಸಿಸಿ ಮಹಿಳಾ ಘಟಕದಿಂದ ದೊಡ್ಡ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹಲವು ಖರ್ಚುಗಳು ಇದೆ. ಊಟದ ಜವಾಬ್ದಾರಿಯನ್ನು ಲಕ್ಷ್ಮಿ ಹೆಬ್ಬಾಳ್ಕರ್ ವಹಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಚುನಾವಣೆಗೆ 26 ಲಕ್ಷ ರೂ. ಹಣವನ್ನು ಖರ್ಚು ಮಾಡಲು ಆಯೋಗವೇ ಅನುಮತಿ ನೀಡಿದೆ. ಈ ಮಿತಿ ಒಳಗಡೆ ನಾವು ಖರ್ಚು ಮಾಡುತ್ತಿದ್ದೇವೆ. ಯಾರಿಗೂ ಹಣವನ್ನು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಖರ್ಚಿಗೆ ಕೈ ಮುಗಿದು ಹಣವನ್ನು ನೀಡುವ ಅಗತ್ಯ ಏನಿದೆ ಎಂದು ಕೇಳಿದ್ದಕ್ಕೆ, ಪಕ್ಷದ ಖರ್ಚಿಗಾಗಿ ಕಾರ್ಯಕರ್ತರಿಗೆ ದುಡ್ಡು ನೀಡಿರಬಹುದು. ಈ ವೇಳೆ ಮತಯಾಚನೆಗೆ ನಮ್ಮ ಜವಾಬ್ದಾರಿ ಇದೆ ಎಂದು ಹೇಳಲು ಕೈ ಮಗಿದಿರಬಹುದು. ಪ್ರಚಾರದ ವೇಳೆ ನಾವಲ್ಲ, ಎಲ್ಲರೂ ಕೈ ಮುಗಿಯುತ್ತಿದ್ದಾರೆ. ಇದಕ್ಕೆ ಯಾವುದೇ ಪ್ರತ್ಯೇಕ ಅರ್ಥವನ್ನು ಕಲ್ಪಿಸಬೇಕಿಲ್ಲ ಎಂದರು.
ಆದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಎರಡು ಸಾವಿರ ರೂ. ನೋಟುಗಳನ್ನೇ ನೀಡುತ್ತಿದ್ದಾರೆ, ಊಟದ ಖರ್ಚಿಗೆ ಎರಡು ಸಾವಿರ ರೂ. ಅಗತ್ಯ ಇದೆಯೇ ಎಂದು ಕೇಳಿದ್ದಕ್ಕೆ, ಬಹಳಷ್ಟು ಜನ ಪ್ರಚಾರಕ್ಕೆ ಬಂದಿದ್ದಾರೆ. ಅವರಿಗೆ ರೂಂ ವ್ಯವಸ್ಥೆ ಆಗಬೇಕು. ವಾಹನಗಳಿಗೆ ಪೆಟ್ರೋಲ್ ಹಾಕಬೇಕು. ಇವುಗಳಿಗೆಲ್ಲ ದುಡ್ಡು ಬೇಕಾಗುತ್ತದೆ. ಈ ಕಾರಣಕ್ಕೆ ಅವರು ಹಣ ಕೊಟ್ಟಿರಬಹುದು ಎಂದು ತಿಳಿಸಿದರು.
ಬಿಜಿಪಿಯವರು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದೆ ಇದಕ್ಕೆ ನೀವು ಏನು ಹೇಳ್ತೀರಿ ಎಂದಿದ್ದಕ್ಕೆ, ಬಿಜೆಪಿಯವರ ಆರೋಪ ಶುದ್ಧ ಸುಳ್ಳು, ಅವರಲ್ಲಿ ಸಾಕ್ಷ್ಯಧಾರ ಇದ್ದರೆ ಕೊಡಲಿ. ಲಕ್ಷಿ ಹೆಬ್ಬಾಳ್ಕರ್ ಮತಕ್ಕಾಗಿ ಹಣವನ್ನು ಹಂಚಿಕೆ ಮಾಡಿಲ್ಲ. ಚುನಾವಣಾ ಖರ್ಚಿನ ಮಿತಿ ಒಳಗಡೆ ಹಣವನ್ನುಕಾಂಗ್ರೆಸ್ ಖರ್ಚು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಬಿಜೆಪಿ ಶಾಸಕ ಸಿಟಿ ರವಿ ಪ್ರತಿಕ್ರಿಯೆ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಪ್ರತಿಕ್ರಿಯೆ