ಬೆಳಗಾವಿ: ಮಾಜಿ ಸಚಿವ ಸತೀಶ್ ಜಾರಕಿಹೊಳಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವೇದಿಕೆ ಮೇಲೆ ಪಕ್ಕ ಕುಳಿತುಕೊಂಡರು ನಡುವೆ ಅಂತರ ಕಾಯ್ದುಕೊಂಡಿದ್ದಾರೆ.
ನಗರದ ಸಿಪಿಇಡಿ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಒಂದೇ ಸೋಫಾ ಮೇಲೆ ಅಕ್ಕ ಪಕ್ಕ ಕುಳಿತರೂ ನಡುವೆ ಜಾಗ ಖಾಲಿ ಬಿಟ್ಟು ಕುಳಿತಿದ್ದಾರೆ. ಮಾತ್ರವಲ್ಲದೆ ತುಟಿ ಬಿಚ್ಚಿ ಸಹ ಮಾತನಾಡಿಲ್ಲ. ಒಬ್ಬರ ಮುಖ ಮತ್ತೊಬ್ಬರು ನೋಡದೇ ಇಡೀ ಕಾರ್ಯಕ್ರಮದಲ್ಲಿ ಪಕ್ಕದಲ್ಲಿ ಸುಮ್ಮನೇ ಕುಳಿತಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕ ಅಭಯ ಪಾಟೀಲ್, ಅನಿಲ್ ಬೆನಕೆ ಜೊತೆ ಚರ್ಚೆ ಮಾಡುತ್ತಿದ್ದರು. ಇತ್ತ ಸತೀಶ ಜಾರಕಿಹೊಳಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಜೊತೆಗೆ ಚರ್ಚೆ ನಡೆಸುತ್ತಿದ್ದರು.
ಜನ ನೋಡುತ್ತಾರೆ ಎನ್ನುವುದನ್ನೂ ಅರಿಯದ ಉಭಯ ನಾಯಕರು ಕಾರ್ಯಕ್ರಮ ಪೂರ್ತಿ ಮಾತನಾಡದೆ ಕುಳಿತಿದ್ದರು. ಇಬ್ಬರೂ ಗೊತ್ತಿಲ್ಲದಂತೆ ಹಾಗೂ ನೋಡಿಲ್ಲದಂತೆ ನಟಿಸುವ ಮೂಲಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಅವರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಧ್ವಜಾರೋಹಣ ನೆರವೇರಿಸಿದರು. ತೆರೆದ ವಾಹನದಲ್ಲಿ ಗೌರವವಂದನೆ ಸ್ವೀಕರಿಸಿ, ನಂತರ ತಂಡಗಳ ಪರಿವೀಕ್ಷಣೆ ನಡೆಸಿದರು.