ಶಿವಮೊಗ್ಗ: ಹರ್ಷ ಮತ್ತು ಪ್ರವೀಣ್ ಕೊಲೆಯಾಗಿರುವುದು ಎಲ್ಲರಿಗೂ ನೋವಾಗಿದೆ. ಆದರೆ ನೋವಿಗೆ ರಾಜೀನಾಮೆಯೇ ಪರಿಹಾರವಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಾಯಕರು ಬೇಕಾದಷ್ಟು ಜನರು ಬರುತ್ತಾರೆ, ಕಾರ್ಯಕರ್ತರು ಬರುವುದಿಲ್ಲ ಎಂಬ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ಹೇಳಿರುವುದು ಸರಿ ಇದೆ. ನಾನು ಒಬ್ಬ ಕಾರ್ಯಕರ್ತ. ಹಿಂದೂ ಕಾರ್ಯಕರ್ತರಾದ ಹರ್ಷ ಮತ್ತು ಪ್ರವೀಣ್ ಕೊಲೆಯಾಗಿರುವ ಸಂದರ್ಭದಲ್ಲಿ ಎಲ್ಲರಿಗೂ ನೋವಿದೆ. ರಾಜ್ಯದಲ್ಲಿರುವ ಎಲ್ಲಾ ಕಾರ್ಯಕರ್ತರಿಗೆ ನೋವಿದೆ. ಸಿಟ್ಟಿನಲ್ಲಿ ರಾಜೀನಾಮೆ ನೀಡುವುದೊಂದೇ ಪರಿಹಾರವಲ್ಲ. ನೋವಿಗೆ ರಾಜೀನಾಮೆ ಉತ್ತರವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದ ಹಿಂದೂ ಕಾರ್ಯಕರ್ತರು, ಅನ್ನದಾತರು!
ನೋವನ್ನು ಪಕ್ಷ ಮತ್ತು ಹಿಂದುತ್ವದ ಮೇಲೆ ತೀರಿಸಿಕೊಳ್ಳುವುದು ಪರಿಹಾರವಲ್ಲ. ಮುಂದೆ ನಮ್ಮ ಕಾರ್ಯಕರ್ತರು ಯಾರು ರಾಜೀನಾಮೆ ನೀಡಬಾರದೆಂಬ ಕಾಳಜಿಯಿಂದಾಗಿ ಈ ರೀತಿ ಹೇಳಿಕೆ ನೀಡಿದ್ದೇನೆ. ಆಕ್ರೋಶಕ್ಕೆ ನಮ್ಮ ಬುದ್ಧಿ ನೀಡಿದರೆ, ನಮ್ಮ ಸಂಘಟನೆಗೆ ಪೆಟ್ಟಾಗುತ್ತದೆ. ರಾಜೀನಾಮೆ ನೀಡಿರುವ ನಮ್ಮ ಕಾರ್ಯಕರ್ತರು ಬೇರೆ ಯಾವ ಪಕ್ಷಕ್ಕೂ ಹೋಗುವುದಿಲ್ಲ. ಅಲ್ಲೊಂದು, ಇಲ್ಲೊಂದು ಜಿಲ್ಲೆಯಲ್ಲಿ ಒಟ್ಟು 13 ಜನ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆಂದು ನಮ್ಮ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಹವಾಮಾನ ಇಲಾಖೆ ನೀಡುವ ಮಳೆಯ ಲೆಕ್ಕವಾದರೂ ತಪ್ಪಬಹುದು ಜೆಡಿಎಸ್ ನಾಯಕರ ಕಣ್ಣೀರಿನ ಮಳೆ ತಪ್ಪದು: ಬಿಜೆಪಿ
ಅವರೆಲ್ಲರ ಮನವೊಲಿಸಿ ರಾಜೀನಾಮೆ ವಾಪಾಸ್ ತೆಗೆದುಕೊಂಡಿದ್ದಾರೆ. ಆಕ್ರೋಶಕ್ಕೆ, ಸಿಟ್ಟಿಗೆ ನಮ್ಮ ಬುದ್ದಿ ನೀಡಿದರೆ, ಸಂಘಟನೆಗೆ ಪೆಟ್ಟಾಗುತ್ತದೆ ಎಂದು ನಾನು ಹೇಳಿಕೆ ನೀಡಿದ್ದೇನೆ. ಯಾವುದೇ ಕಾರ್ಯಕರ್ತನಿಗೆ ನೋವಾಗುವಂತೆ ನಾನು ಹೇಳಿಕೆ ನೀಡಿಲ್ಲ. ಈ ರೀತಿ ರಾಜೀನಾಮೆ ನೀಡಿದರೆ, ಬೇರೆಯವರಿಗೆ ನಿಮ್ಮ ಸ್ಥಾನ ನೀಡಬೇಕಾಗುತ್ತದೆ ಎಂಬ ನಿಟ್ಟಿನಲ್ಲಿ ನಮ್ಮ ರಾಜ್ಯಾಧ್ಯಕ್ಷರ ಅನುಮತಿ ಪಡೆದೇ ಮಾತನಾಡಿದ್ದೇನೆ. ನಾನೊಬ್ಬ ಹಿರಿಯನಾಗಿ ಹೇಳಿದ್ದ ಮಾತಿಗೆ ನೋವಾಗಿದೆ. ಚಕ್ರವರ್ತಿ ಸೂಲಿಬೆಲೆ ಮಾಡುತ್ತಿರುವುದು ಕೂಡ ಹಿಂದುತ್ವದ ಕೆಲಸ, ನಾನು ಕೂಡ ಹಿಂದುತ್ವಕ್ಕೆ ಕೆಲಸ ಮಾಡುತ್ತಿದ್ದೇನೆ. ಯಾರು ರಾಜೀನಾಮೆ ನೀಡಬಾರದೆಂಬ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದೇನೆ ಅಷ್ಟೆ. ಚಕ್ರವರ್ತಿ ಸೂಲಿಬೆಲೆ ಇದರಲ್ಲಿ ತಲೆ ಹಾಕಿಲ್ಲ. ಯುವಕರು ದಾರಿ ತಪ್ಪಬಾರದೆಂಬ ಉದ್ದೇಶದಿಂದ ಅವರು ಈ ರೀತಿ ಹೇಳಿದ್ದಾರೆ ಅಂತ ವಿವರಿಸಿದ್ದಾರೆ.