– ಉತ್ತರ ಕನ್ನಡದಲ್ಲಿ ಬಿತ್ತನೆ ಕಾರ್ಯ ಚುರುಕು
ಬೆಂಗಳೂರು: ರಾಜ್ಯದಲ್ಲಿ ಮಳೆರಾಯ (Rain) ಕಣ್ಮರೆಯಾಗಿದ್ದಾನೆ. ರೈತರು (Farmers) ಬೆಳೆಗಳಿಗೆ ನೀರಿಲ್ಲದೆ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಬೀದರ್, ಕಾರವಾರ, ಉಡುಪಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿ ಮಳೆ ಹಾಗೂ ಬರದ ಛಾಯೆ ಹೇಗಿದೆ ಎಂಬ ವರದಿ ಇಲ್ಲಿದೆ.
ವಿಜಯಪುರ (Vijayapur) ಜಿಲ್ಲೆಯಲ್ಲಿ ಬರದ ಕರಿ ಛಾಯೆ ಆವರಿಸಿದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಆದ ಕಾರಣ ಆಲಮಟ್ಟಿ ಜಲಾಶಯ ಭರ್ತಿ ಆಗಿದೆ. ಆದರೆ ರಾಜ್ಯದ ರಾಜಕೀಯ ಗೊಂದಲದಲ್ಲಿ ಕೃಷ್ಣಾ ನೀರಾವರಿ ಸಲಹಾ ಸಮತಿ ರಚನೆ ಆಗಿಲ್ಲ. ಇದರಿಂದ ರೈತರು ಇದೀಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ಕಾಲುವೆ ನೀರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ – ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ಬೀದರ್ (Bidar) ಜಿಲ್ಲೆಯ ಜೀವನದಿ ಮಾಂಜ್ರಾ ಎರಡು ತಿಂಗಳಿನಿಂದ ಮಳೆ ಇಲ್ಲದೆ ಖಾಲಿ ಖಾಲಿಯಾಗಿದೆ. ರೈತರು, ಜನ, ಜಾನುವಾರು, ಪಕ್ಷಿಗಳು ಹನಿ ನೀರಿಲ್ಲದೆ ಪರದಾಡುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಜಲ ಮೂಲಗಳು ಬತ್ತಿದ್ರೂ ಮಾಂಜ್ರಾ ನದಿಯ ಜಲ ಮಾತ್ರ ಬತ್ತದೆ ಜಿಲ್ಲೆಯ ಹೂಲಸೂರು, ಭಾಲ್ಕಿ, ಔರಾದ್ ಮತ್ತು ಬೀದರ್ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ಸಮಯದಲ್ಲೂ ಜಲ ಸಂಜೀವಿನಿಯಾಗಿರುತ್ತಿತ್ತು. ಈ ಬಾರಿ ಮಾಂಜ್ರಾ ನದಿ ಬಹುತೇಕ ಖಾಲಿ ಖಾಲಿಯಾಗಿದ್ದು ನದಿ ಪಕ್ಕದಲ್ಲಿದ್ದ ಜಮೀನುಗಳ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಮಳೆಗಾಗಿ ಗ್ರಾಮದೇವತೆಗೆ ವಿಶೇಷ ಪೂಜೆ
ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು ತಾಲೂಕಿನಲ್ಲಿ ಕೋವೇರಹಟ್ಟಿ ಗ್ರಾಮ ಭಾಗದಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ ಹಾಗೂ ಅಡಿಕೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕಳೆದ ಎರಡು ತಿಂಗಳಿಂದ ವರುಣನ ಸುಳಿವಿಲ್ಲದೇ ಬರ ಆವರಿಸಿದೆ. ಹೀಗಾಗಿ ಕೋವೇರಹಟ್ಟಿ ಗ್ರಾಮಸ್ಥರು ಗ್ರಾಮದ ಹೊರವಲಯದ ಮೂಲಸ್ಥಾನದಲ್ಲಿರುವ ಗ್ರಾಮದೇವತೆ ಚೌಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಳೆರಾಯನ ಕೃಪೆಗಾಗಿ ಶಕ್ತಿದೇವತೆಗೆ ವಿಶೇಷ ಪೂಜೆ ಸಲ್ಲಿಸಿದರೆ ಮಳೆ ಆಗಲಿದೆ ಎಂಬ ನಂಬಿಕೆ ಇವರದ್ದಾಗಿದೆ.

ಮಳೆರಾಯನ ಕೃಪೆಗಾಗಿ ನಡೆದ ಸಾಂಪ್ರದಾಯಿಕ ಬುಡಕಟ್ಟು ಆಚರಣೆಯಲ್ಲಿ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಭಾಗಿಯಾಗಿದ್ದರು. ಮಾಂಸಾಹಾರ ಹಾಗೂ ಸಸ್ಯಹಾರದ ನೈವೇದ್ಯವನ್ನು ದೇವತೆಗೆ ಅರ್ಪಿಸಿದರು. ಬಳಿಕ ಎಲ್ಲರೂ ಒಟ್ಟಾಗಿ ಸಾಮೂಹಿಕವಾಗಿ ಪ್ರಸಾದ ಸ್ವೀಕರಿಸುವ ವೇಳೆಯೇ ವರುಣ ಸಾಂಕೇತಿಕವಾಗಿ ಕೃಪೆ ತೋರಿದ್ದು, ನೆರೆದಿದ್ದ ಜನರಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿತು.
ಉಡುಪಿಯಲ್ಲಿ ನೆಲಕಚ್ಚಿದ ನಾಡದೋಣಿ ಮೀನುಗಾರಿಕೆ
ಎರಡು ತಿಂಗಳ ಮಳೆಗಾಲದ ಮೀನುಗಾರಿಕೆ ನಿಷೇಧ ಅವಧಿ ಜುಲೈ 31ಕ್ಕೆ ಅಂತ್ಯಗೊಳ್ಳಲಿದ್ದು, ಆಗಸ್ಟ್ 1ರಿಂದ ಮತ್ತೆ ಆಳ ಸಮುದ್ರದಲ್ಲಿ ಯಾಂತ್ರಿಕೃತ ಬೋಟುಗಳ ಮೀನುಗಾರಿಕೆ ಆರಂಭವಾಗಲಿದೆ. ಮಲ್ಪೆ ಸೇರಿದಂತೆ ಕರಾವಳಿಯ ಎಲ್ಲ ಬಂದರುಗಳಲ್ಲಿ ಬೋಟುಗಳ ಸಿದ್ಧತೆ ಭರದಿಂದ ಸಾಗುತ್ತಿದೆ. ಆದರೆ ಮಳೆಯ ಕೊರತೆಯಿಂದ ನಾಡದೋಣಿ ಮೀನುಗಾರಿಕೆ ಸಂಪೂರ್ಣ ನೆಲಕಚ್ಚಿದ್ದು, ಈಗ ಎಲ್ಲರ ಚಿತ್ತ ಯಾಂತ್ರಿಕೃತ ಮೀನುಗಾರಿಕೆಯತ್ತ ನೆಟ್ಟಿದೆ.

ಉತ್ತರ ಕನ್ನಡದಲ್ಲಿ ಚುರುಕುಗೊಂಡ ಮಳೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದೆ. ಇದರಿಂದ ರೈತರು ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಮಳೆ 25 % ಕೊರತೆ ಕಂಡಿತ್ತು. ಆದರೇ ಜುಲೈ ಮಧ್ಯಭಾಗದಿಂದ ಉತ್ತಮ ಮಳೆಯಾಗುತಿದ್ದು ಜಿಲ್ಲೆಯ ಬಹುತೇಕ ಭಾಗದಲ್ಲಿ ಕೃಷಿ ಭೂಮಿ ಹದವಾಗಿದೆ. ಹೀಗಾಗಿ ಜಿಲ್ಲೆಯ 39,610 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆ ಕಾರ್ಯ ಮಾಡಲಾಗಿದೆ. ಕೃಷಿ ಇಲಾಖೆ 58 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆ ಕಾರ್ಯದ ಗುರಿ ಹೊಂದಿದೆ. ಇದನ್ನೂ ಓದಿ: ಬರದನಾಡಲ್ಲಿ ಅಣಬೆ ಬೇಟೆ – ಆಷಾಢ, ಶ್ರಾವಣ ಮಾಸದಲ್ಲಿ ಕಾಡಂಚಿನ ಜನರಿಗೆ ಅಣಬೆ ಹುಡುಕೋದೇ ಹವ್ಯಾಸ
