ಬೆಂಗಳೂರು: ತುಮಕೂರು ಜೆಡಿಎಸ್ ತೆಕ್ಕೆಗೆ ಹೋಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಡಿಸಿಎಂ ಡಾ.ಜಿ.ಪರಮೇಶ್ವರ್ ಮುನಿಸಿಕೊಂಡಿದ್ದು, ಸದ್ಯ ಪರಮೇಶ್ವರ್ ಮನವೊಲಿಕೆಗೆ ಕೈ ನಾಯಕರು ಮುಂದಾಗಿದ್ದಾರೆ.
ಸದಾಶಿವ ನಗರದಲ್ಲಿರುವ ಪರಮೇಶ್ವರ್ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಇತ್ತ ಇಂದು ಅಥವಾ ನಾಳೆ ಪರಮೇಶ್ವರ್ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಎಐಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪರಮೇಶ್ವರ್ ಭೇಟಿ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ನಮ್ಮಿಬ್ಬರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪರಮೇಶ್ವರ್ ನಮ್ಮ ನಾಯಕರಾಗಿದ್ದು, ಚುನಾವಣಾ ಸಿದ್ಧತೆ ಸಂಬಂಧ ಚರ್ಚೆಗೆ ಬಂದಿದ್ದೇನೆ ಅಷ್ಟೇ. ಲೋಕಸಭಾ ಸ್ಥಾನದ ಬಗ್ಗೆ ಎರಡು ಪಕ್ಷದ ನಾಯಕರು ಮಾತನಾಡುತ್ತೇವೆ. ಕೊನೆಯ ಘಳಿಗೆಯಲ್ಲಿ ಏನಾದರೂ ಆಗಬಹುದು ಎಂದು ತಿಳಿಸಿದರು.
ನಾವೆಲ್ಲ ಮುದ್ದಹನುಮೇಗೌಡರ ಪರ ಇದ್ದೇವೆ, ಅವರಿಗೆ ಅನ್ಯಾಯ ಆಗಿದೆ. ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇವೆ. ನಾನೂ ಕೂಡ ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಪರಮೇಶ್ವರ್ ಅವರೊಂದಿಗೆ ಎಲ್ಲರೂ ಈ ಕುರಿತು ಪ್ರಯತ್ನದಲ್ಲಿದ್ದೇವೆ. ಇನ್ನೂ ಸಿಇಸಿ ಸಭೆ ಆಗಿಲ್ಲ, ನಾಳೆ ರಾಜ್ಯಕ್ಕೆ ರಾಹುಲ್ ಗಾಂಧಿ ಆಗಮಿಸಲಿರುವ ಕಾರಣ ಅವರೊಂದಿಗೆ ಚರ್ಚೆ ನಡೆಸುತ್ತೇವೆ ಎಂದರು.
ಇದೇ ವೇಳೆ ರಾಹುಲ್ ಗಾಂಧಿ ನಮ್ಮ ರಾಜ್ಯದಿಂದ ಸ್ಪರ್ಧೆ ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ. ನಾಳೆಯೂ ಈ ಕುರಿತು ಚರ್ಚೆ ಮಾಡುತ್ತೇವೆ. ಉತ್ತರ ಕರ್ನಾಟಕ ಅಥವಾ ದಕ್ಷಿಣ ಕರ್ನಾಟಕ ಎಲ್ಲೇ ಸ್ಪರ್ಧೆ ಮಾಡಲಿ. ಎಲ್ಲರೂ ಒಟ್ಟಾಗಿ ಶ್ರಮಿಸಿ ಗೆಲ್ಲಿಸುತ್ತೇವೆ ಎಂದರು. ಶಿವಮೊಗ್ಗ ಚುನಾವಣಾ ಉಸ್ತುವಾರಿ ಬಗ್ಗೆ ಪ್ರತಿಕ್ರಿಯೆ ನೀಡಿ, ಚುನಾವಣಾ ಉಸ್ತುವಾರಿಗಳ ನೇಮಕ ಇನ್ನೂ ಪಕ್ಷದಿಂದ ತೀರ್ಮಾನ ಆಗಿಲ್ಲ. ಆದರೆ ಡಿ.ಕೆ ಶಿವಕುಮಾರ್ ಶಿವಮೊಗ್ಗಕ್ಕೆ ಏಕೆ ಹೋಗ್ತಾರೆ? ಅವರಿಗೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಚುನಾವಣಾ ಉಸ್ತುವಾರಿ ಇದೆ. ಹೀಗಿರುವಾಗ ಶಿವಮೊಗ್ಗಕ್ಕೆ ಅವರು ಏಕೆ ಹೋಗುತ್ತಾರೆ ಎಂದು ಪ್ರಶ್ನಿಸಿ ಪರೋಕ್ಷವಾಗಿ ಡಿಕೆ ಶಿವಕುಮಾರ್ ಶಿವಮೊಗ್ಗ ಉಸ್ತುವಾರಿ ಆಗುವುದಕ್ಕೆ ವಿರೋಧ ವ್ಯಕ್ತಪಡಿಸಿದರು.