ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಸರ್ಕಾರ ರಚನೆಯ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆ ಬಳಿಕ ಎಲ್ಲಾ ಶಾಸಕರು ಈಗಲ್ ಟನ್ ರೆಸಾರ್ಟ್ ಗೆ ತೆರಳಲಿದ್ದಾರೆ.
ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಶಾಸಕರು ರೆಸಾರ್ಟ್ ಕಡೆ ಮುಖ ಮಾಡಿದ್ದಾರೆ. ಹೀಗಾಗಿ ಈಗಾಗಲೇ ರೆಸಾರ್ಟ್ ನಲ್ಲಿ 102 ರೂಮ್ ಗಳನ್ನು ಕೆಪಿಸಿಸಿ ಬುಕ್ ಮಾಡಿದೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.
ಈ ಮೊದಲು ಶಾಸಕರನ್ನು ಕೊಚ್ಚಿಗೆ ಕರೆದುಕೊಂಡು ಹೋಗುವುದಾಗಿ ಹೇಳಲಾಗಿತ್ತು. ಹೀಗಾಗಿ ಅಲ್ಲಿನ ಕೆಲ ರೆಸಾರ್ಟ್ ಗಳಲ್ಲಿ ಕೂಡ ರೂಂ ಬುಕ್ ಮಾಡಲಾಗಿತ್ತು. ಆದ್ರೆ ಇದೀಗ ಕಾಂಗ್ರೆಸ್ ನಾಯಕರುಗಳು ಮತ್ತೊಂದು ತಂತ್ರಗಾರಿಕೆ ಮಾಡುತ್ತಿದ್ದು, ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ ನತ್ತ ಮುಖ ಮಾಡಿದ್ದಾರೆ.
ಈ ರೆಸಾರ್ಟ್ ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ಅವರ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲದೇ ಕುಮಾರಸ್ವಾಮಿ ಅವರ ಕ್ಷೇತ್ರ ರಾಮನಗರದ ಪಕ್ಕದಲ್ಲಿದೆ. ಇನ್ನು ಬೆಂಗಳೂರಿಗೆ ಕೂಡ ಹತ್ತಿರವಾಗಿರುವುದರಿಂದ ಶಾಸಕರು ಕರೆದುಕೊಂಡು ಬರಲು ಹೀಗೆ ಎಲ್ಲದಕ್ಕೂ ಅನುಕೂಲವಾಗಲಿದೆ. ಹೀಗಾಗಿ ಈ ರೆಸಾರ್ಟ್ ಅನ್ನು ನಾಯಕರು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನೊಂದು ಪ್ರಮುಖ ಅಂಶವೆಂದರೆ ಇಲ್ಲಿ ಕೇವಲ ಕಾಂಗ್ರೆಸ್ ಶಾಸಕರಿಗಷ್ಟೇ ರೂಂ ಗಳನ್ನು ಬುಕ್ ಮಾಡಲಾಗಿದೆ. ಆದ್ರೆ ಜೆಡಿಎಸ್ ಶಾಸಕರು ಎಲ್ಲಿ ಹೋಗುತ್ತಾರೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.