ಕೊಪ್ಪಳ: ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿನೆನಪಿಗಾಗಿ ನಮ್ಮ ಸರ್ಕಾರವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಲ್ಲಾ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರು ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಬಸಪ್ಪ ಆಚಾರ್ ಅವರು ಹೇಳಿದರು.
74ನೇ ಕಲ್ಯಾಣ-ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶದ ಎಲ್ಲ ಭಾಗಗಳಲ್ಲಿ ಆಗಸ್ಟ್ 15 ರಂದು ಮಾತ್ರ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರೆ, ಕಲ್ಯಾಣ-ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಾತ್ರ ಆಗಸ್ಟ್ 15 ಮತ್ತು ಸೆಪ್ಟೆಂಬರ್ 17 ರಂದು ಹೀಗೆ ಎರಡೆರಡು ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಬ್ರಿಟೀಷರ ಪ್ರಚೋದನೆಯಿಂದ ಹೈದರಾಬಾದ್ ಪ್ರದೇಶವನ್ನು ಸ್ವತಂತ್ರ ರಾಜ್ಯವನ್ನಾಗಿ ಅಂದಿನ ನಿಜಾಮರಾದ ಮೀರ್ ಉಸ್ಮಾನ್ ಅಲಿ ಘೋಷಿಸಿಕೊಂಡಿದ್ದರು.
ಹೈದರಾಬಾದ್ ಸಂಸ್ಥಾನದಲ್ಲಿ ಇಂದಿನ ತೆಲಂಗಾಣ, ಮಹಾರಾಷ್ಟ್ರದ ಮರಾಠಾವಾಡ ಹಾಗೂ ರಾಜ್ಯದ ಹೈದರಾಬಾದ್ ಕರ್ನಾಟಕದ 7 ಜಿಲ್ಲೆಗಳು ಸೇರ್ಪಡೆಯಾಗಿದ್ದವು. ನಿಜಾಮರ ಆಡಳಿತದಲ್ಲಿ ಜನಸಾಮಾನ್ಯರಿಗೆ ವಾಕ್ ಸ್ವಾತಂತ್ರ್ಯ, ಸಂಘಟನಾ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯ ಕ್ಕೆ ಅವಕಾಶವಿರಲಿಲ್ಲ. ಅಂದಿನ ನಿಜಾಮರು ಉಸ್ಮಾನಾ ಬಾದಿನ ಕಾಶಿಂ ರಿಜ್ವಿ ಎಂಬ ಮತಾಂಧನ ನೇತೃತ್ವದಲ್ಲಿ ‘ರಜಾಕರ ಪಡೆ’ ಎಂಬ ಭಯೋತ್ಪಾದಕ ಸೈನ್ಯವನ್ನು ನಿರ್ಮಿಸಿ ಜನಸಾಮಾನ್ಯರ ಮೇಲೆ ನಿರಂತರವಾಗಿ ಅನ್ಯಾಯ, ದೌರ್ಜನ್ಯ ಮಾಡುತ್ತಿದ್ದನು. ಇದನ್ನು ಸಹಿಸದೆ ಸ್ವಾಮಿ ರಮಾನಂದ ತೀರ್ಥರು ‘ಹೈದರಾಬಾದ್ ಕರ್ನಾಟಕ ವಿಮೋಚನಾ’ ಹೋರಾಟವನ್ನು ಅಹಿಂಸಾತ್ಮಕವಾಗಿ ಪ್ರಾರಂಭಿಸಿದರು ಎಂದರು.
ಈ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಂದರ್ಭದಲ್ಲಿ ನಾನು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವನಾಗಿರುವುದು ಬಹು ದೊಡ್ಡದಾದ ಜವಾಬ್ದಾರಿಯೆಂದು ಭಾವಿಸಿ ಈ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸರ್ವ ಪ್ರಯತ್ನ ಮಾಡುವುದಾಗಿ ಭರವಸೆಯನ್ನು ನೀಡುತ್ತಾ, ಎಲ್ಲರಿಗೂ ‘ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ’ ಶುಭಾಶಯಗಳನ್ನು ತಿಳಿಸಿದರು. ಇದನ್ನೂ ಓದಿ: ಹಿಂದುತ್ವದ ಹೆಸರು ಹೇಳಿಕೊಂಡು ಬಂದಿದೆ ಅಂತಲ್ಲ, ದೇಶದ ಸಂಸ್ಕೃತಿ ಉಳಿಸುವ ಸರ್ಕಾರ: ಸಚಿವ ನಾಗೇಶ್
ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ:
74ನೇ ಕಲ್ಯಾಣ-ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ವಿವಿಧ ಶಾಲಾ ಮಕ್ಕಳು, ಪೊಲೀಸ್, ಎನ್.ಸಿ.ಸಿ., ಸೇವಾದಳ, ಭಾರತ ಸ್ಕೌಟ್ಸ್ & ಗೈಡ್ಸ್ ಹಾಗೂ ಗೃಹ ರಕ್ಷಕ ದಳದಿಂದ ಪಥಸಂಚಲನ, ಗೌರವ ರಕ್ಷೆ ಸ್ವೀಕಾರ ಕಾರ್ಯಕ್ರಮ ಜರುಗಿತು. ಪಥಸಂಚಲನದಲ್ಲಿ 10 ತಂಡಗಳು ಭಾಗವಹಿಸಿದ್ದವು. ನಗರದ ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದನ್ನೂ ಓದಿ: ಮಾಸ್ಕ್ ಹಾಕದ ವಿದ್ಯಾರ್ಥಿಗಳ ಮೇಲೆ ಸಚಿವ ನಾಗೇಶ್ ಗರಂ