ಕೊಪ್ಪಳ: ಇಂದು ನಿಶ್ಚತಾರ್ಥ ಮಾಡಿಕೊಳ್ಳಬೇಕಿದ್ದ ಯುವತಿ ಮಂಗಳವಾರ ಮಧ್ಯಾಹ್ನ ತನ್ನ ಗೆಳತಿಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಮನೆಯಿಂದ ಹೊರ ಹೋದವಳು ನಾಪತ್ತೆಯಾಗಿದ್ದಾಳೆ.
ಕವಿತಾ(22) ನಾಪತ್ತೆಯಾಗಿರುವ ಯುವತಿ. ಗಂಗಾವತಿ ತಾಲೂಕಿನ ಯರಡೋಣ ಗ್ರಾಮದ ನಿವಾಸಿಯಾಗಿರುವ ಕವಿತಾ ಜೊತೆ ಇಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಗ್ರಾಮದ ಯುವಕನೊಂದಿಗೆ ಮದುವೆ ನಿಶ್ಚಯ ಕಾರ್ಯಕ್ರಮ ನಡೆಯಬೇಕಿತ್ತು.
ಪ್ರಿಯಕರನ ಜೊತೆ ಪರಾರಿ?: ಕವಿತಾ ಕಳೆದ 2 ವರ್ಷಗಳಿಂದ ಕಾರಟಗಿ ಗ್ರಾಮದ ಶ್ರೀಕಾಂತ್ ಎಂಬ ಯುವಕನ ಜೊತೆ ಪ್ರೇಮಾಂಕುರವಾಗಿತ್ತು. ಕವಿತಾ ಮತ್ತು ಶ್ರೀಕಾಂತ್ ಜಾತಿ ಬೇರೆಯಾಗಿದ್ದರಿಂದ ಕವಿತಾ ಮನೆಯಲ್ಲಿ ಇಬ್ಬರ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ವಿಷಯ ತಿಳಿದ ಕವಿತಾ ಪಾಲಕರು ತರಾತುರಿಯಲ್ಲಿ ಕವಿತಾಗೆ ಮದುವೆ ನಿಶ್ಚಯಕ್ಕೆ ಮುಂದಾಗಿದ್ದರು.
ಈ ಮದುವೆ ಇಷ್ಟವಿಲ್ಲದ ಹಿನ್ನೆಲೆಯಲ್ಲಿ ನಿಶ್ಚಿತಾರ್ಥಕ್ಕೆ ಮುನ್ನಾ ದಿನ ಯುವತಿ ಪ್ರಿಯಕರ ಶ್ರೀಕಾಂತ್ ಜೊತೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಕವಿತಾ ಪಾಲಕರ ಅನುಮಾನಕ್ಕೆ ಪುಷ್ಠಿ ಎನ್ನುವಂತೆ ಶ್ರೀಕಾಂತ್ ಕೂಡ ಗ್ರಾಮದಲ್ಲಿ ಕಾಣಿಸುತ್ತಿಲ್ಲ. ಈ ಬಗ್ಗೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಶ್ರೀಕಾಂತ್ ಕವಿತಾರನ್ನು ಅಪಹರಿಸಿದ್ದಾರೆ ಎಂದು ಕವಿತಾ ಪಾಲಕರು ದೂರು ನೀಡಲು ಮುಂದಾಗಿದ್ದಾರೆ.